ಪದ್ಯ ೨೨: ಸಂಜಯನು ರಣರಸವನ್ನು ಹೇಗೆ ವಿವರಿಸಿದನು?

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ (ಗದಾ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನ ಪ್ರಶ್ನೆಯನ್ನು ವಿವರಿಸುತ್ತಾ, ಎಲೈ ರಾಜನೇ ಯುದ್ಧರಂಗದ ಸಾರವನ್ನು ಹೇಳುತ್ತೇನೆ ಕೇಳು. ಸಹದೇವನ ಕೈಯಲ್ಲಿ ಶಕುನಿಯು ಇಹಲೋಕವನ್ನು ತ್ಯಜಿಸಿದನು. ನಕುಲನ ಬಾಣಗಳಿಂದ ಉಲೂಕನು ಮಡಿದನು. ಅರ್ಜುನನ ಬಾಣಗಳಿಂದ ತಮ್ಮ ಸಮಸ್ತ ಸೇನೆಯೊಂದಿಗೆ ತ್ರಿಗರ್ತ ದೇಶಾಧಿಪತಿಗಳಾದ ಸುಶರ್ಮನೇ ಮೊದಲಾದ ಪರಾಕ್ರಮಿಗಳು ಅಪ್ಸರೆಯರ ಗುಂಪನ್ನು ಸೇರಿದರು ಎಂದು ಸಂಜಯನು ವಿವರಿಸಿದನು.

ಅರ್ಥ:
ಬಿದ್ದು: ಬೀಳು, ಕುಸಿ; ಜೀಯ: ಒಡೆಯ; ಮಡಿ: ಸಾಯಿ, ಸಾವನಪ್ಪು; ಅಂಬು: ಬಾಣ; ಆದಿ: ಮುಂತಾದ; ಸಕಲ: ಎಲ್ಲಾ; ಗಜ: ಆನೆ; ಹಯ: ಕುದುರೆ; ಸೇನೆ: ಸೈನ್ಯ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಶರ: ಬಾಣ; ಅಮರಿ: ಅಪ್ಸರೆ; ನಿಕರ: ಗುಂಪು; ಸೇರು: ಜೊತೆಗೂಡು; ಹೇಳು: ತಿಳಿಸು; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಶಕುನಿ +ಬಿದ್ದನು +ಜೀಯ +ಸಹದೇ
ವಕನ +ಕೈಯಲ್+ಉಳೂಕ+ ಮಡಿದನು
ನಕುಲನ್+ಅಂಬಿನಲ್+ಆ ತ್ರಿಗರ್ತ+ ಸುಶರ್ಮಕ+ಆದಿಗಳು
ಸಕಲ+ ಗಜ+ಹಯ+ಸೇನೆ +ಸಮಸ
ಪ್ತಕರು +ಪಾರ್ಥನ +ಶರದಲ್+ಅಮರೀ
ನಿಕರವನು+ ಸೇರಿದರು +ಹೇಳುವುದೇನು+ ರಣರಸವ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಿದ್ದನು, ಮಡಿದನು, ಅಮರೀನಿಕರ ಸೇರಿದನು

ನಿಮ್ಮ ಟಿಪ್ಪಣಿ ಬರೆಯಿರಿ