ಪದ್ಯ ೧೨: ಬಿಸಿಲಿನ ತಾಪವನ್ನು ಯಾರ ಪ್ರಭೆ ಕಡಿಮೆ ಮಾಡಿತು?

ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಯಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ (ಗದಾ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭಾನುಮತಿಯು ತನ್ನ ಬೀಡಿನಿಂದ ಹೊರಹೊರಟಳು. ಸಹಸ್ರ ಸಂಖ್ಯೆಯಲ್ಲಿ ಸ್ತ್ರೀಯರು ತಮ್ಮ ಮುಖದ ಚಂದ್ರಪ್ರಭೆಯಿಂದ ಬಿಸಿಲನ್ನು ತವಿಸುತ್ತಾ ಹೊರಟರು. ಭಾನುದತ್ತ, ಸೈಂಧವ, ಕರ್ಣ, ದುಶ್ಯಾಸನರ ಪತ್ನಿಯರು ದುಃಖಿಸುತ್ತಾ ರಥಗಳನ್ನು ಹತ್ತಿದರು.

ಅರ್ಥ:
ಹೊರವಂಟು: ತೆರಳು; ಅರಸ: ರಾಜ; ಮಾನಿನಿ: ಹೆಣ್ಣು; ಸಹಸ್ರ: ಸಾವಿರ; ಆನನ: ಮುಖ; ಇಂದು: ಚಂದ್ರ; ಪ್ರಭೆ: ಕಾಂತಿ, ಹೊಳಪು; ವಿಭಾಡಿಸು: ನಾಶಮಾಡು; ಬಿಸಿಲು: ಸೂರ್ಯನ ಪ್ರಕಾಶ; ಬೇಗೆ: ಬೆಂಕಿ, ಕಿಚ್ಚು; ಸೂನು: ಮಗ; ಜಲಜ: ಕಮಲ; ಆನನೆ: ಹೆಣ್ಣು, ಸ್ತ್ರೀ; ಒಗ್ಗು: ಗುಂಪು; ರಥ: ಬಂಡಿ; ಏರು: ಹತ್ತು; ದುಗುಡ: ದುಃಖ;

ಪದವಿಂಗಡಣೆ:
ಭಾನುಮತಿ +ಹೊರವಂಟಳ್+ಅರಸನ
ಮಾನಿನಿಯರು +ಸಹಸ್ರ+ಸಂಖ್ಯೆಯೊಳ್
ಆನನ+ಇಂದುಪ್ರಭೆ+ ವಿಭಾಡಿಸೆ +ಬಿಸಿಲ +ಬೇಗೆಗಳ
ಭಾನುದತ್ತನ +ಸೈಂಧವನ+ ರವಿ
ಸೂನುವಿನ +ದುಶ್ಯಾಸನನ+ ಜಲಜ
ಆನನೆಯರ್+ಒಗ್ಗಿನಲಿ +ರಥವೇರಿದರು +ದುಗುಡದಲಿ

ಅಚ್ಚರಿ:
(೧) ಸ್ತ್ರೀಯರ ಸೌಂದರ್ಯವನ್ನು ವಿವರಿಸುವ ಪರಿ – ಅರಸನ ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
(೨) ಮಾನನಿ, ಜಲಜಾನನೆ – ಸ್ತ್ರೀಯರನ್ನು ಕರೆಯುವ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ