ಪದ್ಯ ೧೫: ಬಂಡಿಗಳಲ್ಲಿ ಏನನ್ನು ತುಂಬಲಾಯಿತು?

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ (ಗದಾ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ನೀರಿನ ಬುದ್ದಲಿಗಳು, ಬಂಗಾರದ ಕಲಶ ಕೊಪ್ಪರಿಗೆಗಳು, ದೀಪದ ಕಂಬಗಳು, ಬಂಗಾರದ ಸರಪಣಿಹಾಕಿದ ಯಂತ್ರಚಾಲಿತ ಗೊಂಬೆಗಳು, ಮರಕತದ ಮಧುಪಾತ್ರೆಗಳು, ನೀಲದ ಕಲಶ, ವೈಢೂರ್ಯದ ತಟ್ಟೆಗಳನ್ನು ದೂತರು ತಂದು ಬಂಡಿಗಳಲ್ಲಿ ತುಂಬಿದರು.

ಅರ್ಥ:
ಕರ: ಹಸ್ತ; ಹೊಂಗಳಸ: ಚಿನ್ನದ ಕುಂಭ; ಉಪ್ಪರಿಗೆ: ಮಹಡಿ, ಸೌಧ; ದೀಪ: ಸೊಡರು; ಸ್ತಂಭ: ಕಂಬ; ಹೇಮ: ಚಿನ್ನ; ಸರಪಣಿ: ಸಂಕೋಲೆ, ಶೃಂಖಲೆ; ಮಣಿ: ಬೆಲೆಬಾಳುವ ರತ್ನ; ಜಂತ್ರ: ಯಂತ್ರ, ವಾದ್ಯ; ಜೀವ: ಉಸಿರಾಡುವ ದೇಹ; ಜೀವಪುತ್ರಿ: ಗೊಂಬೆ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಮಧು: ಜೇನು; ನೀಲ: ಉದ್ದ, ದೊಡ್ಡ; ಕರಗ: ಕಲಶ; ವೈಡೂರಿಯ: ನವರತ್ನಗಳಲ್ಲಿ ಒಂದು; ಪಡಿಗ: ಪಾತ್ರೆ; ಚರರು: ದೂತರು; ಒಟ್ಟು: ಸೇರಿಸು; ಬಂಡಿ: ರಥ; ಭಾರ: ದೊಡ್ಡ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಕರವತಿಗೆ +ಹೊಂಗಳಸ +ಹೊಂಗ್
ಉಪ್ಪರಿಗೆ +ದೀಪಸ್ತಂಭ +ಹೇಮದ
ಸರಪಣಿಯ+ ಮಣಿಮಯದ +ಜಂತ್ರದ +ಜೀವಪುತ್ರಿಗಳ
ಮರಕತದ +ಮಧುಪಾತ್ರೆ +ನೀಲದ
ಕರಗ+ ವೈಡೂರಿಯದ +ಪಡಿಗವ
ಚರರು +ತಂದೊಟ್ಟಿದರು +ಬಂಡಿಗೆ +ಭಾರ+ಸಂಖ್ಯೆಯಲಿ

ಅಚ್ಚರಿ:
(೧) ಹೊಂಗಳಸ ಹೊಂಗೊಪ್ಪರಿಗೆ – ಪದಗಳ ಬಳಕೆ
(೨) ಯಂತ್ರದ ಗೊಂಬೆ ಎಂದು ಹೇಳಲು – ಜಂತ್ರದ ಜೀವಪುತ್ರಿಗಳ

ಪದ್ಯ ೧೪: ಬಂಡಿಗಳನ್ನು ಎಳೆಯುವುದೇಕೆ ಪ್ರಯಾಸವಾಗಿತ್ತು?

ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ (ಗದಾ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚೌರಿಯ, ಚಿತ್ರ ರಂಜಿತವಾದ ಹಾಸುಗಳು, ಬಂಗಾರದ ಕೆಲಸದ ತೆರೆಗಳು, ಛತ್ರ, ಬೀಸಣಿಗೆ, ಚಾಮರಗಳ ಕಟ್ಟುಗಳು, ದಿಂಬುಗಳು, ಹೊಂಗೆಲಸ ಮಾಡಿದ ಹೊದಿಕೆಗಳು, ಬಂಗಾರದ ಬಣ್ನದ ದಿಂಡುಗಳ ಹೊರೆಗಳನ್ನು ಬಂಡಿಗಳ ಮೇಲೊಟ್ಟಿದರು. ಅವನ್ನೆಳೆಯುವುದೇ ಪ್ರಯಾಸದ ಕೆಲಸ.

ಅರ್ಥ:
ಬಳಿ: ಹತ್ತಿರ; ಚೌರಿ: ಚೌರಿಯ ಕೂದಲು; ಹೊರೆ: ಭಾರ; ಚಿತ್ರ:ಬರೆದ ಆಕೃತಿ; ಆವಳಿ: ಸಾಲು; ವಿಧಾನ: ರೀತಿ, ಬಗೆ; ಹಾಸು: ಹಾಸಿಗೆ, ಶಯ್ಯೆ; ಹೊಂಬಳಿ: ಚಿನ್ನದ ಕಸೂತಿ ಮಾಡಿದ ಬಟ್ಟೆ, ಜರತಾರಿ ವಸ್ತ್ರ; ತೆರೆಸೀರೆ: ಅಡ್ಡ ಹಿಡಿದಿರುವ ಬಟ್ಟೆ; ಛತ್ರ: ಕೊಡೆ; ವ್ಯಜನ: ಬೀಸಣಿಗೆ; ಸೀಗುರಿ: ಚಾಮರ; ಹೊಳೆ: ಪ್ರಕಾಶ; ಪಟ್ಟೆ: ರೇಷ್ಮೆಸೀರೆ; ಝಗೆ: ಹೊಳಪು, ಪ್ರಕಾಶ; ಸುವರ್ಣ: ಚಿನ್ನ; ಆವಳಿ: ಗುಂಪು, ಸಾಲು; ದಿಂಡು: ಬಟ್ಟೆಯ ಕಟ್ಟು, ಹೊರೆ; ಒಟ್ಟು: ರಾಶಿ; ಬಂಡಿ: ರಥ; ಜವ: ಯಮ; ಜಡಿ:ಕೊಲ್ಲು, ಗದರಿಸು;

ಪದವಿಂಗಡಣೆ:
ಬಳಿಯ +ಚೌರಿಯ +ಹೊರೆಯ +ಚಿತ್ರಾ
ವಳಿ +ವಿಧಾನದ +ಹಾಸುಗಳ +ಹೊಂ
ಬಳಿಯ +ತೆರೆ+ಸೀರೆಗಳ+ ಛತ್ರ +ವ್ಯಜನ +ಸೀಗುರಿಯ
ಹೊಳೆವ +ಪಟ್ಟೆಯಲ್+ಓಡಿಗೆಯ +ಹೊಂ
ಗೆಲಸದೊಳು +ಝಗೆಗಳ +ಸುವರ್ಣಾ
ವಳಿಯ +ದಿಂಡುಗಳ್+ಒಟ್ಟಿದವು +ಬಂಡಿಗಳ +ಜವ +ಜಡಿಯೆ

ಅಚ್ಚರಿ:
(೧) ಬಳಿ, ಆವಳಿ – ಪ್ರಾಸ ಪದ
(೨) ಹೊಂಬಳಿ, ಹೊಂಗೆಲಸ – ಚಿನ್ನ ಎಂದು ಹೇಳುವ ಪರಿ

ಪದ್ಯ ೧೩: ಬಂಡಿಗಳಲ್ಲಿ ಯಾವ ವಸ್ತುಗಳನ್ನು ಹೇರಿದರು?

ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರದುಕೂಲದ ಪಟ್ಟ ಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು (ಗದಾ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲಕ್ಷಗಟ್ಟಲೆ ಬಂಡಿಗಳಲ್ಲಿ ಆಭರಣಗಳ ಪೆಟ್ಟಿಗೆಗಳನ್ನು ಹೇರಿದರು. ಪಟ್ಟವಾಳಿ ವಸ್ತ್ರಗಳು ಬಂಗಾರದ ಪಾತ್ರೆಗಳು ಇವನ್ನು ಬಂಗಾರದ ಪೆಟ್ಟಿಗೆಗಳಲ್ಲಿ ಹಾಕಿ ಬಂಡಿಯಲ್ಲಿಟ್ಟು ಕಳುಹಿಸಿದರು.

ಅರ್ಥ:
ಸರಕು: ಸಾಮಾನು, ಸಾಮಗ್ರಿ; ಹಿಡಿ: ಗ್ರಹಿಸು; ಬಂಡಿ: ರಥ; ಶತ: ನೂರು; ಸಾವಿರ: ಸಹಸ್ರ; ನೃಪಾಲಯ: ಅರಮನೆ; ವಿವಿಧ: ಹಲವಾರು; ಆಭರಣ: ಒಡವೆ; ಭರಿತ: ತುಂಬಿದ; ಭೂರಿ: ಹೆಚ್ಚು, ಅಧಿಕ; ಪೆಟ್ಟಿಗೆ: ಡಬ್ಬ; ಘಾಡಿಸು: ವ್ಯಾಪಿಸು; ರಥ: ಬಂಡಿ; ವರ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ಪಟ್ಟ: ವಸ್ತ್ರ; ಕರ್ಮ: ಕೆಲಸ; ಒತ್ತು: ಮುತ್ತು, ಚುಚ್ಚು; ಚಾಮೀಕರ: ಬಂಗಾರ, ಚಿನ್ನ; ಬಹುವಿಧ: ಹಲವಾರು ರೀತಿ; ಭಾಂಡ: ಒಡವೆ, ಆಭರಣ; ನೂಕು: ತಳ್ಳು;

ಪದವಿಂಗಡಣೆ:
ಸರಕ +ಹಿಡಿದವು +ಬಂಡಿ +ಶತ+ಸಾ
ವಿರ +ನೃಪಾಲಯದಿಂದ +ವಿವಿಧ
ಆಭರಣ+ಭರಿತದ +ಭೂರಿ +ಪೆಟ್ಟಿಗೆ +ಘಾಡಿಸಿತು +ರಥವ
ವರ+ದುಕೂಲದ +ಪಟ್ಟ +ಕರ್ಮದ
ಥರದದಿಂದ್+ಒತ್ತಿದವು +ಚಾಮೀ
ಕರಮಯದ +ಬಹುವಿಧದ +ಭಾಂಡದ +ಬಂಡಿ +ನೂಕಿದವು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಹುವಿಧದ ಭಾಂಡದ ಬಂಡಿ

ಪದ್ಯ ೧೨: ಬಿಸಿಲಿನ ತಾಪವನ್ನು ಯಾರ ಪ್ರಭೆ ಕಡಿಮೆ ಮಾಡಿತು?

ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಯಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ (ಗದಾ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭಾನುಮತಿಯು ತನ್ನ ಬೀಡಿನಿಂದ ಹೊರಹೊರಟಳು. ಸಹಸ್ರ ಸಂಖ್ಯೆಯಲ್ಲಿ ಸ್ತ್ರೀಯರು ತಮ್ಮ ಮುಖದ ಚಂದ್ರಪ್ರಭೆಯಿಂದ ಬಿಸಿಲನ್ನು ತವಿಸುತ್ತಾ ಹೊರಟರು. ಭಾನುದತ್ತ, ಸೈಂಧವ, ಕರ್ಣ, ದುಶ್ಯಾಸನರ ಪತ್ನಿಯರು ದುಃಖಿಸುತ್ತಾ ರಥಗಳನ್ನು ಹತ್ತಿದರು.

ಅರ್ಥ:
ಹೊರವಂಟು: ತೆರಳು; ಅರಸ: ರಾಜ; ಮಾನಿನಿ: ಹೆಣ್ಣು; ಸಹಸ್ರ: ಸಾವಿರ; ಆನನ: ಮುಖ; ಇಂದು: ಚಂದ್ರ; ಪ್ರಭೆ: ಕಾಂತಿ, ಹೊಳಪು; ವಿಭಾಡಿಸು: ನಾಶಮಾಡು; ಬಿಸಿಲು: ಸೂರ್ಯನ ಪ್ರಕಾಶ; ಬೇಗೆ: ಬೆಂಕಿ, ಕಿಚ್ಚು; ಸೂನು: ಮಗ; ಜಲಜ: ಕಮಲ; ಆನನೆ: ಹೆಣ್ಣು, ಸ್ತ್ರೀ; ಒಗ್ಗು: ಗುಂಪು; ರಥ: ಬಂಡಿ; ಏರು: ಹತ್ತು; ದುಗುಡ: ದುಃಖ;

ಪದವಿಂಗಡಣೆ:
ಭಾನುಮತಿ +ಹೊರವಂಟಳ್+ಅರಸನ
ಮಾನಿನಿಯರು +ಸಹಸ್ರ+ಸಂಖ್ಯೆಯೊಳ್
ಆನನ+ಇಂದುಪ್ರಭೆ+ ವಿಭಾಡಿಸೆ +ಬಿಸಿಲ +ಬೇಗೆಗಳ
ಭಾನುದತ್ತನ +ಸೈಂಧವನ+ ರವಿ
ಸೂನುವಿನ +ದುಶ್ಯಾಸನನ+ ಜಲಜ
ಆನನೆಯರ್+ಒಗ್ಗಿನಲಿ +ರಥವೇರಿದರು +ದುಗುಡದಲಿ

ಅಚ್ಚರಿ:
(೧) ಸ್ತ್ರೀಯರ ಸೌಂದರ್ಯವನ್ನು ವಿವರಿಸುವ ಪರಿ – ಅರಸನ ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
(೨) ಮಾನನಿ, ಜಲಜಾನನೆ – ಸ್ತ್ರೀಯರನ್ನು ಕರೆಯುವ ಪರಿ

ಪದ್ಯ ೧೧: ಹಸ್ತಿನಾಪುರದ ವಾಣಿಜ್ಯ ವೀಥಿಯ ಸ್ಥಿತಿ ಹೇಗಿತ್ತು?

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ (ಗದಾ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ಕ್ಷಣದಲ್ಲೇ ಗಲಭೆ ಆರಂಭವಾಯಿತು. ಕೆಲ ಜನರು ಓಡಿ ಹೋದರು. ಅಂಗಡಿ ಬೀದಿಯಲ್ಲಿ ಜನ ಅಲುಗಾಡಿದರು. ಬಂಡಿಗಳನ್ನು ಹೂಡಿದರು. ಕಮಾನು ಬಂಡಿಗಳು ಓಡಾಡಿದವು. ರಥಗಳೊಡನೆ ಬದ್ದರದ ಪಲ್ಲಕ್ಕಿಗಳು ಅರಮನೆಗೆ ಬಂದವು.

ಅರ್ಥ:
ಕೂಡು: ಜೊತೆ; ಗಜಬಜ: ಗೊಂದಲ; ಪಾಳೆಯ: ಬಿಡಾರ; ಓಡು: ಧಾವಿಸು; ಜನ: ನರರ ಗುಂಪು; ಅಲ್ಲಾಡು: ತೂಗಾಡು; ಕ್ರಯ: ಬೆಲೆ, ಕಿಮ್ಮತ್ತು; ವಿಕ್ರಯ: ಮಾರಾಟ, ಬಿಕರಿ; ವೀಥಿ: ದಾರಿ, ಮಾರ್ಗ; ವಾಣಿಜ್ಯ: ವ್ಯಾಪಾರ; ಹೂಡು: ಅಣಿಗೊಳಿಸು; ಬಂಡಿ: ರಥ; ಹರಿ: ಕಡಿ, ಕತ್ತರಿಸು; ಎಡೆಯಾಡು: ಅತ್ತಿತ್ತ ಸುತ್ತಾಡು; ಕೊಲ್ಲಾರಿ: ಮುಖಂಡ, ಪ್ರಮುಖ; ರಥ: ಬಂಡಿ; ಬದ್ದರ: ಮಂಗಳಕರವಾದುದು; ದಂಡಿ: ಘನತೆ, ಹಿರಿಮೆ, ಶಕ್ತಿ; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಕೂಡೆ +ಗಜಬಜವಾಯ್ತು +ಪಾಳೆಯವ್
ಓಡಿತ್+ಅಲ್ಲಿಯದಲ್ಲಿ +ಜನವ್
ಅಲ್ಲಾಡಿದುದು +ಕ್ರಯ+ವಿಕ್ರಯದ +ವಾಣಿಜ್ಯ+ವೀಥಿಯಲಿ
ಹೂಡಿದವು +ಬಂಡಿಗಳು+ ಹರಿದೆಡೆ
ಆಡಿದವು +ಕೊಲ್ಲಾರಿಗಳು +ರಥ
ಕೂಡಿದವು +ಬದ್ದರದ +ದಂಡಿಗೆ +ಬಂದವ್+ಅರಮನೆಗೆ

ಅಚ್ಚರಿ:
(೧) ಗಜಬಜ, ಕ್ರಯವಿಕ್ರಯ – ಪದಗಳ ಬಳಕೆ
(೨) ಹೂಡಿ, ಆಡಿ, ಓಡಿ, ಅಲ್ಲಾಡಿ, ಕೂಡಿ – ಪ್ರಾಸ ಪದಗಳು