ಪದ್ಯ ೩೫: ದುರ್ಯೋಧನನು ಯಾವ ರಹಸ್ಯವನ್ನು ಸಂಜಯನಿಗೆ ಹೇಳಿದನು?

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಂಜಯ, ನಡೆದುಕೊಂಡು ಹೋಗಿ ಮುಟ್ಟಬಲ್ಲ ದೂರದಲ್ಲಿ ಒಂದು ವಿಶ್ವವಿಖ್ಯಾತ ಸರೋವರವಿದೆ. ಅದರ ಮಧ್ಯದಲ್ಲಿ ಒಂದು ದಿನದವರೆಗೆ ನೀರಿನಅಲ್ಲಿರುತ್ತೇನೆ. ಆನಂತರ ಯುದ್ಧಮಾಡಿ ಕುಂತಿಯ ಮಕ್ಕಳಿಗೆ ಯಮಲೋಕವನ್ನು ತೋರಿಸುತ್ತೇನೆ, ಇದು ರಹಸ್ಯ. ಇದನ್ನು ನನ್ನ ತಂದೆ ತಾಯಿಗಳಿಗೆ ತಿಳಿಸು ಎಂದು ದುರ್ಯೋಧನನು ಸಂಜಯನಿಗೆ ಹೇಳಿದನು.

ಅರ್ಥ:
ಸರೋವರ: ಸರಸಿ; ಹರಿದೂರ: ನಡಿಗೆಯ ಅಂತರ; ಭುವನ: ಭೂಮಿ; ವಿಖ್ಯಾತ: ಪ್ರಸಿದ್ಧ; ಮಧ್ಯ: ನಡುವೆ; ಮುಳುಗು: ನೀರಿನಲ್ಲಿ ಮೀಯು; ಪರಿಯಂತ: ವರೆಗು; ಸಲಲಿ: ನೀರು; ಕದನ: ಯುದ್ಧ; ಕೌಂತೇಯ: ಪಾಂಡವ; ಯಮ: ಜವ; ಸದನ: ಮನೆ, ನಿವಾಸ; ತೋರು: ಗೋಚರಿಸು; ರಹಸ್ಯ: ಗುಟ್ಟು; ಜನನಿ: ತಾಯಿ; ಜನಕ: ತಂದೆ; ಅರುಹು: ತಿಳಿಸು;

ಪದವಿಂಗಡಣೆ:
ಇದೆ+ ಸರೋವರವೊಂದು +ಹರಿ+ದೂ
ರದಲಿ +ಭುವನ+ಖ್ಯಾತ +ತನ್
ಮಧ್ಯದಲಿ+ ಮುಳುಗಿಹೆನ್+ಒಂದುದಿನ +ಪರಿಯಂತ +ಸಲಿಲದಲಿ
ಕದನದಲಿ +ಕೌಂತೇಯರನು +ಯಮ
ಸದನದಲಿ +ತೋರುವೆನು +ತಾನೆಂ
ಬುದು +ರಹಸ್ಯವು +ಜನನಿ +ಜನಕಂಗ್+ಅರುಹು +ನೀನೆಂದ

ಅಚ್ಚರಿ:
(೧) ಸಾಯಿಸುವೆ ಎಂದು ಹೇಳುವ ಪರಿ – ಕೌಂತೇಯರನು ಯಮ ಸದನದಲಿ ತೋರುವೆನು

ನಿಮ್ಮ ಟಿಪ್ಪಣಿ ಬರೆಯಿರಿ