ಪದ್ಯ ೩೩: ದುರ್ಯೋಧನನು ತನಗೇನು ಬೇಕು ಎಂದು ಹೇಳಿದನು?

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ (ಗದಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಂಜಯ, ನನ್ನ ಕೋಪ ಮಾಸಿಲ್ಲ, ಮನಸ್ಸಿನ ಧೈರ್ಯದ ಶಕ್ತಿ ಸಾಮರ್ಥ್ಯಗಳು ಮಾಸಿಲ್ಲ. ನಾಚಿಕೆಪಡುವ ಇಲ್ಲವೇ ಇಲ್ಲ. ಯುಧಿಷ್ಠಿರಾದಿ ಪಾಂಡವರಲ್ಲಿ ವಿರೋಧ ಹೋಗಿಲ್ಲ. ನೀನೇಕೆ ಸುಮ್ಮನೆ ಅಳುತ್ತಿರುವೆ? ಕೌರವನು ಶತ್ರುಗಳನ್ನು ಅಲುಗಾಡಿಸಿ ಕೊಲ್ಲಬಲ್ಲನು ಎಂಬ ಕೀರ್ತಿ ನನಗೆ ಬೇಕು. ಬೇರೆಯ ರಾಜ್ಯವನ್ನು ನಾನೊಲ್ಲೆ ಎಂದನು.

ಅರ್ಥ:
ಖಾತಿ: ಕೋಪ, ಕ್ರೋಧ; ಕಂದು: ಮಸಕಾಗು; ಮನ: ಮನಸ್ಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ತೇಜಸ್ಸು; ಲಜ್ಜೆ: ನಾಚಿಕೆ, ಸಿಗ್ಗು; ಅಭಿಮತ: ಅಭಿಪ್ರಾಯ; ಜಾತಿ: ಕುಲ; ಕೆಡು: ಇಲ್ಲವಾಗು, ಸೋಲು; ವಿರೋಧ: ತಡೆ, ಅಡ್ಡಿ, ವೈರತ್ವ; ಬಿಡು: ತೊರೆ, ತ್ಯಜಿಸು; ಆದಿ: ಮುಂತಾದ; ಪ್ರಳಾಪ: ಪ್ರಲಾಪ, ದುಃಖ; ವಿಧೂತ: ಅಲುಗಾಡುವ, ಅಲ್ಲಾಡುವ; ರಿಪು: ವೈರಿ; ಖ್ಯಾತಿ: ಪ್ರಸಿದ್ಧಿ, ಹೆಸರುವಾಸಿ; ಬೇರೆ: ಅನ್ಯ;

ಪದವಿಂಗಡಣೆ:
ಖಾತಿ +ಕಂದದು +ಮನದ +ಧೈರ್ಯದ
ಧಾತು +ಕುಂದದು +ಲಜ್ಜೆ+ಅಭಿಮತ
ಜಾತಿಗೆಡದು+ ವಿರೋಧ +ಬಿಡದು +ಯುಧಿಷ್ಠಿರಾದ್ಯರಲಿ
ಏತಕಿದು +ನಿನ್ನೀ +ಪ್ರಳಾಪ +ವಿ
ಧೂತರಿಪು +ಕುರುರಾಯನ್+ಎಂಬೀ
ಖ್ಯಾತಿಯಲ್ಲದೆ +ಬೇರೆ +ರಾಜ್ಯವನ್ನೊಲ್ಲೆ +ನಾನೆಂದ

ಅಚ್ಚರಿ:
(೧) ದುರ್ಯೋಧನನ ವೀರನುಡಿ – ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ

ನಿಮ್ಮ ಟಿಪ್ಪಣಿ ಬರೆಯಿರಿ