ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ (ಗದಾ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಹಿಂದೆ ಧರ್ಮಜನ ಪಟ್ಟದ ರಾಣಿಯನ್ನು ಸಭೆಗೆಳೆಸಿ ತಂದು ಭಾರೀ ಅವಮಾನ ಪಡಿಸಿದೆ, ಶ್ರೀಕೃಷ್ಣನು ಬಂದು ಐದು ಊರುಗಳನ್ನು ಕೊಡು ಸಂಧಿ ಮಾಡಿಸುತ್ತೇನೆ ಎಂದು ಬೇಡಿದಾಗ ಪಾಂಡವರ ಮನಸ್ಸುಗಳಿಗೆ ವಿಷವನ್ನುಣಿಸಿದೆ. ಈಗ ಏನಾಗಿದೆ, ನಿನ್ನ ಸಹೋದರರು, ಮಕ್ಕಳು, ಜ್ಞಾತಿಗಳು, ಬಾಂಧವರು ಎಲ್ಲರೂ ಅಳಿದುಹೋದರು. ನಿನ್ನೊಬ್ಬನ ನೆರಳು ಉಳಿದಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಹಿಂದೆ: ಪೂರ್ವ; ರಾಯ: ರಾಜ; ಪಟ್ಟ: ಸಿಂಹಾಸನ ಗದ್ದುಗೆ; ಅರಸಿ: ರಾಣಿ; ತಂದು: ಬರೆಮಾದು; ಭಾರಿ: ದೊಡ್ಡ; ಭಂಗ: ಮುರಿಯುವಿಕೆ; ಬಡಿಸು: ಹೊಡೆಯಿಸು; ಹರಿ: ಕೃಷ್ಣ; ಊರು: ಪ್ರದೇಶ; ಬೇಡು: ಕೇಳು; ಚಿತ್ತ: ಮನಸ್ಸು; ಕಂದಕ: ತಗ್ಗು, ಹಳ್ಳ; ಬಿತ್ತು: ಉಂಟುಮಾಡು; ಕದನ: ಯುದ್ಧ; ನೆಳಲು: ನೆರಳು; ಉಳಿ: ಬದುಕಿರು, ನಿಲ್ಲು; ಸಹೋದರ: ಅಣ್ಣ ತಮ್ಮಂದಿರು; ವೃಂದ: ಗುಂಪು; ತನುಜ: ಮಕ್ಕಳು; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಅಳಿ: ಸಾವು;

ಪದವಿಂಗಡಣೆ:
ಹಿಂದೆ +ರಾಯನ +ಪಟ್ಟದರಸಿಯ
ತಂದು +ಭಾರಿಯ +ಭಂಗ+ಬಡಿಸಿದೆ
ಬಂದು +ಹರಿ+ಐದೂರ+ ಬೇಡಿದರ್+ಅವರ +ಚಿತ್ತದಲಿ
ಕಂದ +ಬಿತ್ತಿದೆ+ ಕದನದಲಿ ನೀ
ನೊಂದು +ನೆಳಲ್+ಉಳಿಯಲು+ ಸಹೋದರ
ವೃಂದ +ತನುಜ +ಜ್ಞಾತಿ +ಬಾಂಧವರ್+ಅಳಿದರ್+ಅದರಿಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಕದನದಲಿ ನೀನೊಂದು ನೆಳಲುಳಿಯಲು
(೨) ಬಂದು, ತಂದು, ನೊಂದು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ