ಪದ್ಯ ೨೫: ಸಂಜಯನು ಯಾವ ವಿಷಯವನ್ನು ಹೇಳಲಿ ಎಂದು ಕೇಳಿದನು?

ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸುಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಈಗು ಊರಿಗೆ ಹೋಗಿ ನಿನ್ನ ತಂದೆಗೆ ನಿನ್ನ ಮಗನು ವಿಜಯಶಾಲಿಯಾದ, ವಿಜಯಧ್ವಜವನ್ನು ಹಾರಿಸು ಎಂದು ಹೇಳಲೇ? ತಲೆ ತಪ್ಪಿಸಿಕೊಂಡು ಓಡಿಹೋಗಿ ಬದುಕಿದ ಎನ್ನಲೇ? ಅಂತಃಪುರದ ರಾಣಿಯರಿಗೆ ಯಾವ ಶುಭ ಸಂದೇಶವನ್ನು ನೀಡಲಿ? ಧೃತರಾಷ್ಟ್ರನನ್ನು ಅಳಿಸಲೋ, ನಗಿಸಲು ಏನು ಹೇಳಲಿ, ನಿನ್ನ ತಾಯಿಗೆ ನಾನು ಏನೆಂದು ಹೇಳಲಿ ಎಂದು ಸಂಜಯನು ಕೇಳಿದನು.

ಅರ್ಥ:
ಗೆಲಿ: ಜಯಿಸು; ಅರಸ: ರಾಜ; ಕಟ್ಟಿಸು: ನಿರ್ಮಿಸು; ಗುಡಿ: ಆಲಯ; ತಲೆ: ಶಿರ; ಬಳಚು: ಕತ್ತರಿಸು; ಓಡು: ಧಾವಿಸು; ಬದುಕು: ಜೀವಿಸು; ಮೇಣ್: ಅಥವಾ; ಲಲನೆ: ಹೆಣ್ಣು; ಒಸಗೆ: ಶುಭ; ಕುರುಡ: ಅಂಧ; ಅಳಿಸು: ರೋಧಿಸು; ನಗಿಸು: ಹರ್ಷ, ಸಂತೋಷ ಪಡಿಸು; ತಾಯಿ: ಮಾತೆ, ಅಮ್ಮ; ಕಲಿ: ಅಭ್ಯಾಸ ಮಾಡು, ತಿಳಿ; ಬುದ್ಧಿ: ತಿಳಿವು, ಅರಿವು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗೆಲಿದನ್+ಅರಸನು+ ಹಸ್ತಿನಾಪುರ
ದೊಳಗೆ +ಕಟ್ಟಿಸು+ಗುಡಿಯನ್+ಎಂಬೆನೊ
ತಲೆಬಳಿಚಿ +ತಾನೋಡಿ +ಬದುಕಿದನ್+ಎಂಬೆನೋ +ಮೇಣು
ಲಲನೆಯರಿಗೇನ್+ಒಸಗೆ +ಕುರುಡನನ್
ಅಳಿಸುವೆನೊ +ನಗಿಸುವೆನೊ +ತಾಯಿಗೆ
ಕಲಿಸು +ಬುದ್ಧಿಯನ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ವಿರುದ್ಧ ಪದ – ಅಳಿಸು, ನಗಿಸು
(೨) ತ ಕಾರದ ಜೋಡಿ ಪದ – ತಲೆಬಳಿಚಿ ತಾನೋಡಿ
(೩) ಭೂಪ, ಅರಸ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ