ಪದ್ಯ ೨೧: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೨?

ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೂಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ (ಗದಾ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸುಂದರವೂ ಅತಿ ಮೃದುಯೂ ಆದ ಹಂಸತೂಲಿಕಾ ತಲ್ಪದಲ್ಲಿ ಮಲಗಿದ ನಿನ್ನ ದೇಹವು, ಮುರಿದ ಆಯುಧಗಳ ಎಲುಬುಗಳ ಮೇಲೆ ಸ್ತೋತು ಮಲಗಿತಲ್ಲವೇ? ಮುಂದೆ ಹೆಜ್ಜೆಯನ್ನಿಟ್ಟರೆ ಕೈಗೊಟ್ಟು ಕರೆದೊಯ್ಯುವ ರಾಜರು, ಅಕ್ಕಪಕ್ಕದಲ್ಲಿ ಪಾಯ, ಅವಧಾರು ಎನ್ನುತ್ತಿದ್ದವರನ್ನು ಕಳಿಸಿ ಬಂದೆಯಲ್ಲಾ, ಇದು ಸಾರ್ವಭೌಮನ ಚಿಹ್ನೆಯೇ ಸರಿ ಎಂದು ಸಂಜಯನು ದುರ್ಯೋಧನನ ಸ್ಥಿತಿಯನ್ನು ನೋಡಿ ಮರುಗಿದನು.

ಅರ್ಥ:
ಲಲಿತ: ಚೆಲುವು; ಮೃದು: ಕೋಮಲ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ತೂಳ: ಆವೇಶ, ಉನ್ಮಾದ; ಉಳಿತ: ತಂಗು, ಬಿಡು; ಕೋಮಲ: ಮೃದು; ಕಾಯ: ದೇಹ; ಕೈದು: ಆಯುಧ; ಎಲುಗ: ಮೂಳೆ; ಹಾಸು: ಹಾಸಿಗೆ, ಶಯ್ಯೆ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಲಗು: ನಿದ್ರಿಸು; ಸುಳಿ: ತೀಡು, ಆವರಿಸು; ಅರಸು: ರಾಜ; ಕೆಲಬಲ: ಅಕ್ಕಪಕ್ಕ, ಎಡಬಲ; ಪಾಯವಧಾರು: ಎಚ್ಚರಿಕೆ; ಕಳುಹು: ತೆರಳು; ಬಂದು: ಆಗಮಿಸು; ಸಾರ್ವಭೌಮ: ಚಕ್ರವರ್ತಿ; ಚಿಹ್ನ: ಗುರುತು;

ಪದವಿಂಗಡಣೆ:
ಲಲಿತ +ಮೃದುತರ +ಹಂಸತೂಳದಲ್
ಉಳಿತ +ಕೋಮಲ +ಕಾಯ +ಕೈದುಗಳ್
ಎಲುಗಳೊಟ್ಟಿಲ+ ಹಾಸಿನಲಿ +ಪೈಸರಿಸಿ +ಮಲಗಿತಲಾ
ಸುಳಿಯೆ +ಕೈಗೂಡುವ್+ಅರಸುಗಳ +ಕೆಲ
ಬಲದ +ಪಾಯವಧಾರಿನವರನು
ಕಳುಹಿ +ಬಂದೈ +ಸಾರ್ವಭೌಮರ+ ಚಿಹ್ನವಿದೆಯೆಂದ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಲಲಿತ ಮೃದುತರ ಹಂಸತೂಳದಲುಳಿತ ಕೋಮಲ ಕಾಯ

ನಿಮ್ಮ ಟಿಪ್ಪಣಿ ಬರೆಯಿರಿ