ಪದ್ಯ ೬: ಸಂಜಯನ ಪ್ರಾಣವನ್ನು ಯಾರು ಕಾಪಾಡಿದರು?

ಸೆಳೆದಡಾಯ್ಧವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ (ಗದಾ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕತ್ತಿಯನ್ನೆಳೆದು, ಸಂಜಯನ ತಲೆಯ ಹಿಂಭಾಗಕ್ಕೆ ಹೊಡೆಯಲು ಸನ್ನದ್ಧನಾದನು. ಆದರೆ ಅದೇ ಸಮಯಕ್ಕೆ ವೇದವ್ಯಾಸರು ಅಲ್ಲಿಗೆ ಬಂದು, ಸಾತ್ಯಕಿ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದೀಯ, ಸಂಜಯನು ದುಷ್ಟನೇ? ಅವನು ನಮ್ಮ ಶಿಷ್ಯ, ನೀನು ಅವನನ್ನು ಕೊಲ್ಲಬಹುದೇ ಎಂದು ಕೇಳಿ ಅಡಾಯುಧವನ್ನು ತಪ್ಪಿಸಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಅಡಾಯ್ದ: ಅಡ್ಡ ಬಂದು; ಹೆಡತಲೆ: ಹಿಂದಲೆ; ಹೂಡು: ಕಟ್ಟು; ಅರಿ: ಸೀಳು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಅಗ್ಗ: ಶ್ರೇಷ್ಠ; ಪುಣ್ಯ: ಸದಾಚಾರ; ಲೇಸು: ಒಳಿತು; ಖಳ: ದುಷ್ಟ; ಶಿಷ್ಯ: ವಿದ್ಯಾರ್ಥಿ; ಕೊಲು: ಸಾಯಿಸು; ಕೊಂಡು: ಪಡೆದು; ಕೊರಳು: ಗಂಟಲು; ಅಡಾಯುಧ: ಮೇಲಕ್ಕೆ ಬಾಗಿದ ಕತ್ತಿ;

ಪದವಿಂಗಡಣೆ:
ಸೆಳೆದ್+ಅಡಾಯ್ಧವ+ ಸಂಜಯನ+ ಹೆಡ
ತಲೆಗೆ +ಹೂಡಿದನ್+ಅರಿವ +ಸಮಯಕೆ
ಸುಳಿದನ್+ಅಗ್ಗದ +ಬಾದರಾಯಣನ್+ಅವನ+ ಪುಣ್ಯದಲಿ
ಎಲೆಲೆ +ಸಾತ್ಯಕಿ +ಲೇಸು+ಮಾಡಿದೆ
ಖಳನೆ +ಸಂಜಯನ್+ಎಮ್ಮ +ಶಿಷ್ಯನ
ಕೊಲುವುದೇ +ನೀನೆನುತ +ಕೊಂಡನು+ ಕೊರಳ್+ಅಡಾಯುಧವ

ಅಚ್ಚರಿ:
(೧) ತಲೆಯ ಹಿಂಭಾಗ ಎಂದು ಹೇಳಲು – ಹೆಡತಲೆ ಪದದ ಪ್ರಯೋಗ
(೨) ಸಂಜಯನನ್ನು ರಕ್ಷಿಸಿದ ಪರಿ – ಖಳನೆ ಸಂಜಯನೆಮ್ಮ ಶಿಷ್ಯನಕೊಲುವುದೇ

ನಿಮ್ಮ ಟಿಪ್ಪಣಿ ಬರೆಯಿರಿ