ಪದ್ಯ ೩೫: ಧರ್ಮಜನ ಮೇಲೆ ದುರ್ಯೋಧನನು ಹೇಗೆ ದಾಳಿ ಮಾಡಿದನು?

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನುರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ (ಗದಾ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಜೋರಿನ ಹೊಡೆತವನ್ನು ತಡೆಯಲಾದರೆ ಸಹದೇವನು ಹಿಂದಿರುಗಿದನು. ನಕುಲನು ಬರಲು ಕೌರವನು ಬೋಳೆಯಂಬಿನಿಂದ ಹೊಡೆದನು. ನಕುಲನು ಸಹ ಇದನ್ನು ತಡೆಯಲಾರದೆ ಜಾರಿದನು. ಧೀರ ಕೌರವನು ನೂರಾನೆಗಳ ಸೈನ್ಯದೊಂದಿಗೆ ಧರ್ಮಜನ ದಳದ ಮೇಲೆ ದಾಳಿಮಾಡಿದನು.

ಅರ್ಥ:
ಧರಣಿಪ: ರಾಜ; ಥಟ್ಟಣೆ: ಗುಂಪು; ನಿಲ್ಲು: ತಡೆ; ತೆರಳು: ಹಿಂದಿರುಗು; ಹಿರಿಯ: ದೊಡ್ಡ; ಅಡ್ಡೈಸು: ಅಡ್ಡ ಹಾಕು; ಕೊಡು: ನೀಡು; ಅಂಬು: ಬಾಣ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಸೆಡೆ: ಗರ್ವಿಸು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಆನೆ: ಗಜ; ಡಾವರಿಸು: ಸುತ್ತು, ತಿರುಗಾಡು; ದಳ: ಸೈನ್ಯ; ಧೀರ: ಶೂರ;

ಪದವಿಂಗಡಣೆ:
ಧರಣಿಪನ +ಥಟ್ಟಣೆಗೆ +ನಿಲ್ಲದೆ
ತೆರಳಿದನು +ಸಹದೇವನ್+ಆತನ
ಹಿರಿಯನ್+ಅಡ್ಡೈಸಿದಡೆ +ಕೊಟ್ಟನು +ಬೋಳೆ+ಅಂಬಿನಲಿ
ಶರಹತಿಗೆ +ಸೆಡೆದ್+ಆ+ ನಕುಲ+ ಪೈ
ಸರಿಸಿದನು +ನುರಾನೆಯಲಿ +ಡಾ
ವರಿಸಿದನು+ ಧರ್ಮಜನ +ದಳದಲಿ+ ಧೀರ+ ಕುರುರಾಯ

ಅಚ್ಚರಿ:
(೧) ಪೈಸರಿಸಿದನು, ಡಾವರಿಸಿದನು, ತೆರಳಿದನು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ