ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ನಿಮ್ಮ ಟಿಪ್ಪಣಿ ಬರೆಯಿರಿ