ಪದ್ಯ ೬೧: ಭೀಮನು ದುರ್ಯೋಧನನನ್ನು ಹೇಗೆ ಹಂಗಿಸಿದನು?

ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ (ಗದಾ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೀಮನು ರಥವನ್ನು ಬಿಟ್ಟು ಭೂಮಿಗೆ ಧುಮುಕಿ, ಕೌರವರಾಯ, ಈಗ ಕಾಣಿಸಿಕೊಂಡೆ, ವೀರನಾಗಿ ನಿಲ್ಲು ಹೇಡಿಯಂತೆ ಓಡಬೇಡ. ಆನೆಗಳ ರೌದ್ರ ಯುದ್ಧದಲ್ಲಿ ನೀನು ನಿಪುಣನಲ್ಲವೇ? ತೆಗೆದುಕೋ ಎಂದು ಜೋದರು ಬಿಡುವ ಬಾಣಗಳನ್ನು ಕಡೆಗಣಿಸಿ ಆನೆಗಳನ್ನು ಓಡಿಸಿದನು.

ಅರ್ಥ:
ಒದೆ: ನೂಕು; ರಥ: ಬಂಡಿ; ಧರೆ: ಭೂಮಿ; ಧುಮ್ಮಿಕ್ಕು: ಜಿಗಿ; ರಾಯ: ರಾಜ; ಮೈದೋರು: ವೀರನಾಗಿ ನಿಲ್ಲು, ಕಾಣಿಸಿಕೊ; ಕಲಿ: ಶೂರ; ಪಾಲಿಸು: ಅನುಕರಿಸು; ಪಲಾಯಣ: ಓಡು; ರದನಿ: ಆನೆ; ರೌದ್ರ: ಭಯಂಕರ; ಆಹವ: ಯುದ್ಧ; ಕೋವಿದ: ಪಂಡಿತ; ಕರಿ: ಆನೆ; ಕೆದರು: ಹರಡು; ಕಲಿ: ಶೂರ; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವವ; ಅಂಬು: ಬಾಣ; ಸೈರಿಸು: ತಾಳು, ಸಹನೆ;

ಪದವಿಂಗಡಣೆ:
ಒದೆದು +ರಥವನು +ಧರೆಗೆ +ಧುಮ್ಮಿ
ಕ್ಕಿದನು +ಕೌರವರಾಯ +ಮೈದೋ
ರಿದೆಯಲಾ +ಕಲಿಯಾಗು +ಪಾಲಿಸದಿರು +ಪಲಾಯನವ
ರದನಿಗಳ+ ರೌದ್ರ+ಆಹವಕೆ +ಕೋ
ವಿದನಲೇ +ಕೊಳ್ಳೆನುತ +ಕರಿಗಳ
ಕೆದರಿದನು +ಕಲಿ+ಜೋದರ್+ಅಂಬಿನ +ಸರಿಯ +ಸೈರಿಸುತ

ಅಚ್ಚರಿ:
(೧) ದುರ್ಯೋಧನನನ್ನು ಹಂಗಿಸುವ ಪರಿ – ಕೌರವರಾಯ ಮೈದೋರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
(೨) ಕ ಕಾರದ ಸಾಲು ಪದ – ಕೋವಿದನಲೇ ಕೊಳ್ಳೆನುತ ಕರಿಗಳ ಕೆದರಿದನು ಕಲಿಜೋದರಂಬಿನ

ನಿಮ್ಮ ಟಿಪ್ಪಣಿ ಬರೆಯಿರಿ