ಪದ್ಯ ೭: ಕುರುಸೇನೆಯು ಅರ್ಜುನನೆದುರು ಹೇಗೆ ಬಂದರು?

ರಣಪರಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ (ಗದಾ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧ ವಿಶಾರದರಾದ ಕುರುಸೇನೆಯ ವೀರರು, ರಣವಾದ್ಯಗಳ ರಭಸದೊಡನೆ ಬೆಟ್ಟವನ್ನೇ ಅಲುಗಿಸುವ ಅದ್ಭುತವಾದ ಶಬ್ದವನ್ನು ಮಾಡುತ್ತಾ ಅರ್ಜುನನ ರಥವನ್ನು ತರುಬಿದರು. ರಾವುತರು ಬರಲು ಅವರ ಕುದುರೆಗಳ ಗೊರಸುಗಳು ಅರ್ಜುನನ ರಥದ ಕುದುರೆಗಳಗೊರಸುಗಳನ್ನು ಘಟ್ಟಿಸಿದವು.

ಅರ್ಥ:
ರಣ: ಯುದ್ಧ; ಪರಿಚ್ಛೇದಿ: ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದವ, ವಿದ್ವಾಂಸ; ಮಿಗೆ: ಅಧಿಕ; ಸಂದಣಿಸು: ಗುಂಪುಗೂಡು; ವಾದ್ಯ: ಸಂಗೀತದ ಸಾಧನ; ಅಣಿ: ಸಿದ್ಧವಾಗು; ಅದ್ರಿ: ಬೆಟ್ಟ; ಒದೆ: ನೂಕು; ಅದುಭುತ: ಆಶ್ಚರ್ಯ; ಬೊಬ್ಬೆ: ಕೂಗು; ಲಳಿ: ರಭಸ; ಕುಣಿ: ನರ್ತಿಸು; ಉರು: ಹೆಚ್ಚಾದ, ಶ್ರೇಷ್ಠ; ರಥ: ಬಂಡಿ; ಹಯ: ಕುದುರೆ; ಹೆಣಗು: ಹೋರಾಡು; ಹಯ: ಕುದುರೆ; ಕಂದ: ಕುತ್ತಿಗೆ, ಭುಜಾಗ್ರ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಹೊಯ್ಲು: ಏಟು, ಹೊಡೆತ; ಆರೋಹ: ಹತ್ತುವವ;

ಪದವಿಂಗಡಣೆ:
ರಣ+ಪರಚ್ಛೇದಿಗಳು +ಮಿಗೆ +ಸಂ
ದಣಿಸಿತೋ +ಕುರುಸೇನೆ+ ವಾದ್ಯದ
ರಣಿತವ್+ಅದ್ರಿಯನ್+ಒದೆದುದ್+ಅದುಭತ +ಬೊಬ್ಬೆಗಳ +ಲಳಿಯ
ಕುಣಿದವ್+ಅರ್ಜುನನ್+ಉರು+ರಥದ +ಮುಂ
ಕಣಿಯಲ್+ಆರೋಹಕರು +ರಥ +ಹಯ
ಹೆಣಗಿದವು +ಹಯದೊಡನೆ +ಕಂದದ +ಖುರದ +ಹೊಯ್ಲಿನಲಿ

ಅಚ್ಚರಿ:
(೧) ರಣಪರಿಚ್ಛೇದಿ – ಪದದ ಬಳಕೆ
(೨) ಕುಣಿ ಪದದ ಬಳಕೆ – ಕುಣಿದವರ್ಜುನನುರುರಥದ ಮುಂಕಣಿಯಲಾರೋಹಕರು
(೩) ಪದದ ರಚನೆ – ವಾದ್ಯದರಣಿತವದ್ರಿಯನೊದೆದುದದುಭತ
(೪) ರೂಪಕದ ಪ್ರಯೋಗ – ಕುರುಸೇನೆ ವಾದ್ಯದರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ

ನಿಮ್ಮ ಟಿಪ್ಪಣಿ ಬರೆಯಿರಿ