ಪದ್ಯ ೫೮: ಶಲ್ಯನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು?

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲವೋ ಯುಧಿಷ್ಠಿರ, ಬಾಣಗಳಿಂದ ನನ್ನ ಖಡ್ಗ ಗುರಾಣಿಗಳನ್ನು ಕತ್ತರಿಸಿಹಾಕು, ನೀನು ಬಿಲ್ಲು ವಿದ್ಯೆಯಲ್ಲಿ ಚತುರನೆನ್ನುತ್ತಾರೆ, ನನಗೆ ಕವಚವಿಲ್ಲ, ರಥವಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಓಡಿ ಹೋಗುವುದೊಂದೇ ದಾರಿ. ಕ್ಷತ್ರಿಯನಾದುದರಿಂದ ಓಡಿ ಹೋಗುವಂತಿಲ್ಲ. ನಿನ್ನಲ್ಲಿ ಸಾಹಸವಿದ್ದುದೇ ಆದರೆ ನಿಲ್ಲು ಎಂದು ಶಲ್ಯನು ಮೂದಲಿಸಿದನು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಎಸು: ಬಾಣ ಪ್ರಯೋಗ; ಖಡ್ಗ: ಕತ್ತಿ; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಚಾಪ: ಬಿಲ್ಲು ಕುಶಲ: ಚಾತುರ್ಯ; ತನುತ್ರ: ಕವಚ; ರಥ: ಬಂಡಿ; ಅಸು: ಪ್ರಾಣ; ತಡೆ: ನಿಲ್ಲು; ರಣ: ಯುದ್ಧಭೂಮಿ; ಪಲಾಯನ: ಓಡು; ಸಾಹಸಿ: ಪರಾಕ್ರಮಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಎಸು+ ಯುಧಿಷ್ಠಿರ +ಹಲಗೆ +ಖಡ್ಗವ
ಕುಸುರಿದ್+ಅರಿ+ಆ +ಚಾಪವಿದ್ಯಾ
ಕುಶಲನೆಂಬರಲೈ +ತನುತ್ರ +ರಥಂಗಳಿಲ್ಲ್+ಎಮಗೆ
ಅಸುವ +ತಡೆವರೆ +ರಣ+ಪಲಾಯನವ್
ಎಸೆವುದೇ +ಕ್ಷತ್ರಿಯರಿಗ್+ಅತಿ+ಸಾ
ಹಸಿಕನಾದಡೆ +ನಿಲ್ಲೆನುತ +ಮೂದಲಿಸಿದನು +ಶಲ್ಯ

ಅಚ್ಚರಿ:
(೧) ಎಸು, ಅಸು – ಪ್ರಾಸ ಪದ
(೨) ಹಲಗೆ, ಖಡ್ಗ, ಚಾಪ – ಆಯುಧಗಳನ್ನು ಹೆಸರಿಸುವ ಶಬ್ದ
(೩) ಕ್ಷತ್ರಿಯರ ಧರ್ಮ – ಅಸುವ ತಡೆವರೆ ರಣಪಲಾಯನವೆಸೆವುದೇ ಕ್ಷತ್ರಿಯರಿಗ್

ನಿಮ್ಮ ಟಿಪ್ಪಣಿ ಬರೆಯಿರಿ