ಪದ್ಯ ೨೦: ಶಲ್ಯನೇ ಯುದ್ಧದ ಮುಂಚೂಣಿಗೇಕೆ ಬಂದನು?

ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ (ಶಲ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುರುಸೇನೆಯು ಅಶ್ವತ್ಥಾಮನನ್ನು ಹಿಂದಿಟ್ಟು ಪಾಂಡವ ಬಲವನ್ನು ಇದಿರಿಸಲು, ಶಲ್ಯನು ಆ ಸೇನೆಯನ್ನು ನೋಡಿ, ಯುದ್ಧ ಮಾಡಲು ನಾನಿರಲಾಗಿ, ಕಾರಣವಿಲ್ಲದೆ ಸೇನೆಯನ್ನು ಕೊಲ್ಲಿಸಿದರೆ ಭೀಷ್ಮ ದ್ರೋಣಾದಿಗಳು ನನ್ನನ್ನು ಕಂಡು ನಗದಿರುವರೇ ಎಂದುಕೊಂಡು ತಾನೇ ಯುದ್ಧಕ್ಕೆ ಬಂದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸುತ: ಮಕ್ಕಳು; ಹಿಂದಿರಿಸು: ಹಿಂದಕ್ಕೆ ತಳ್ಳು; ಪರಬಲ: ವೈರಿ ಸೈನ್ಯ; ಅಭಿಮುಖ: ಎದುರು; ಮೋಹರ: ಯುದ್ಧ; ನಿಂದು: ನಿಲ್ಲು; ಕಂಡು: ನೋಡು; ಬಲ: ಶಕ್ತಿ, ಸೈನ್ಯ; ಧುರ: ಯುದ್ಧ, ಕಾಳಗ; ಸಂಹರ: ನಾಶ; ನಗೆ: ನಗು, ಸಂತಸ; ತೆಗೆ: ಹೊರತರು; ನಡೆ: ಚಲಿಸು;

ಪದವಿಂಗಡಣೆ:
ಉರವಣಿಸಿತಿದು+ ಗುರುಸುತನ +ಹಿಂ
ದಿರಿಸಿ +ಪರಬಲದ್+ಅಭಿಮುಖಕೆ +ಮೋ
ಹರಿಸಿ +ನಿಂದುದು +ಕಂಡನಿತ್ತಲು +ಶಲ್ಯನಾ +ಬಲವ
ಧುರಕೆ +ನಾವಿರೆ +ಸೇನೆ+ಉಪಸಂ
ಹರಿಸಬಹುದೇ +ದ್ರೋಣ +ಭೀಷ್ಮಾ
ದ್ಯರಿಗೆ +ನಗೆಗೆಡೆ+ ನಾವಹೆವೆ+ ತೆಗೆ+ಎನುತ +ನಡೆತಂದ

ಅಚ್ಚರಿ:
(೧) ಹಿಂದಿರಿಸಿ, ಮೋಹರಿಸಿ, ಉರವಣಿಸಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ