ಪದ್ಯ ೭: ಭೀಮನು ಹೇಗೆ ಯುದ್ಧವನ್ನು ಮಾಡುತ್ತಿದ್ದನು?

ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರ
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ (ಶಲ್ಯ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನ ಯುದ್ಧದಂತಲ್ಲ, ಭೀಮನ ಲೆಕ್ಕಾಚಾರ ಉಗ್ರವಾದುದು. ದೊರೆಯು ಆವನೊಡನೆ ಕದನಕ್ಕೆ ಹೋಗಿದ್ದಾನೆ ಎಂದು ಕೃತವರ್ಮ ಕೃಪರು ಮುಂದೆ ಬಂದು ಬಾಣಗಳ ಮಳೆಗರೆದು, ಕೌರವನನ್ನು ಹಿಂದಿಟ್ಟು ದಾಳಿ ಮಾಡುತ್ತಿದ್ದ ಭೀಮನ ಗುಂಪನ್ನು ನುಗ್ಗಿ ಶತ್ರುಗಳನ್ನು ಸಂಹರಿಸಿದರು.

ಅರ್ಥ:
ರಾಯ: ರಾಜ; ಹೊಕ್ಕು: ಸೇರು; ಆಯ: ಪರಿಮಿತಿ, ರೀತಿ; ಬಲುಹು: ಶಕ್ತಿ; ನೂಕು: ತಳ್ಳು; ಸಾಯಕ: ಬಾಣ, ಶರ; ಮಳೆ: ವರ್ಷ; ಹಿಂದಿಕ್ಕು: ಹಿಂದೆ ತಳ್ಳು; ವೇಢೆಯ: ಹಯಮಂಡಲ; ವಾಯುಜ: ಭೀಮ; ವಂಗಡ: ಗುಂಪು; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ರಾಯ +ಹೊಕ್ಕನು +ಭೀಮಸೇನನದ್
ಆಯ +ಬಲುಹೋ +ಧರ್ಮಪುತ್ರನದ್
ಆಯವಲ್ಲಿದು+ ನೂಕೆನುತ+ ಕೃತವರ್ಮ +ಗೌತಮರ
ಸಾಯಕದ +ಮಳೆಗರೆದು +ಕೌರವ
ರಾಯನನು +ಹಿಂದಿಕ್ಕಿ +ವೇಢೆಯ
ವಾಯುಜನ+ ವಂಗಡವ+ ಮುರಿದರು+ ತರಿದರ್+ಅರಿಬಲವ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವೇಢೆಯ ವಾಯುಜನ ವಂಗಡವ
(೨) ಯುದ್ಧದ ತೀವ್ರತೆ – ಸಾಯಕದ ಮಳೆಗರೆದು ಕೌರವರಾಯನನು ಹಿಂದಿಕ್ಕಿ

ನಿಮ್ಮ ಟಿಪ್ಪಣಿ ಬರೆಯಿರಿ