ಪದ್ಯ ೧೨: ಭೀಮನ ಹೊಡೆತದ ಪ್ರಭಾವ ಹೇಗಿತ್ತು?

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ (ಶಲ್ಯ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಸಾವಿರ ಕುದುರೆಗಳು, ಮೂರು ಸಾವಿರ ರಥಗಳು ಭೀಮನ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಬಿದ್ದವು. ಬಿಲ್ಲು, ಹರಿಗೆ ಸಬಳಗಳನ್ನು ಹಿಡಿದ ಎಂಟು ಲಕ್ಷ ಸೈನಿಕರನ್ನು ಸಂಹರಿಸಿದನು. ಉಳಿದವರು ಯುದ್ಧದಿಂದ ಪಲಾಯನ ಮಾಡಿದರು.

ಅರ್ಥ:
ಅಳಿ: ನಾಶ; ಸಾವಿರ: ಸಹಸ್ರ; ಬಲು: ಸೈನ್ಯ; ಕುದುರೆ: ಅಶ್ವ; ರಥ: ಬಂಡಿ; ನೆಲ: ಭೂಮಿ; ವರ್ತಿಸು: ಚಲಿಸು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಲು: ಬಿಲ್ಲು, ಚಾಪ; ಸಬಳ: ಈಟಿ; ಪದಾತಿ: ಕಾಲಾಳು, ಸೈನಿಕ; ತಲೆ: ಶಿರ; ತೊಡಸು: ಸಿಕ್ಕಿಸು; ಲಕ್ಕ: ಲಕ್ಷ; ಉಳಿದ: ಮಿಕ್ಕ; ಬಲ: ಸೈನ್ಯ; ಓಲೈಸು: ಪ್ರೀತಿಸು; ಘನ: ಶ್ರೇಷ್ಠ; ಪಲಾಯನ: ಹಿಂದಿರುಗು, ಪರಾರಿ;

ಪದವಿಂಗಡಣೆ:
ಅಳಿದುದ್+ಐನೂರ್+ಆನೆ +ಸಾವಿರ
ಬಲು+ಕುದುರೆ +ರಥ +ಮೂರು +ಸಾವಿರ
ನೆಲಕೆ+ ಕೈವರ್ತಿಸಿತು +ಭೀಮನ +ಹೊಯ್ಲ +ಹೋರಟೆಗೆ
ಬಿಲುಹರಿಗೆ +ಸಬಳದ+ ಪದಾತಿಯ
ತಲೆಯ +ತೊಡಸಿದನ್+ಎಂಟು +ಲಕ್ಕವನ್
ಉಳಿದ +ಬಲವ್+ಓಲೈಸುತಿರ್ದುದು +ಘನ +ಪಲಾಯನವ

ಅಚ್ಚರಿ:
(೧) ಓಡಿದರು ಎಂದು ಹೇಳುವ ಪರಿ – ಉಳಿದ ಬಲವೋಲೈಸುತಿರ್ದುದು ಘನ ಪಲಾಯನವ

ನಿಮ್ಮ ಟಿಪ್ಪಣಿ ಬರೆಯಿರಿ