ಪದ್ಯ ೪೭: ಶಲ್ಯನ ಸಾಮರ್ಥ್ಯವೆಂತಹದು?

ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ (ಶಲ್ಯ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣ ಪ್ರಯೋಗದ ಚಾತುರ್ಯ, ದ್ರೋಣನ ಶರಚಮತ್ಕಾರ, ಕರ್ಣನ ಎಸುಗೆಯ ವಿಸ್ತಾರ ಇವೆಲ್ಲವುಗಳ ಸಾರವು ಶಲ್ಯನಲ್ಲಿದೆ. ಅರಸನನ್ನು ರಕ್ಷಿಸಲು ಸಾತ್ಯಕಿ ನಿಲ್ಲಲಿ ಭೀಮ ಧೃಷ್ಟದ್ಯುಮ್ನರು ನೋಡುತ್ತಿರಲಿ ಎಂದು ಹೇಳಿ ಅರ್ಜುನನು ಶಲ್ಯನನ್ನಿದಿರಿಸಿದನು.

ಅರ್ಥ:
ಸುರನದೀಸುತ: ಭೀಷ್ಮ; ಶರ: ಬಾಣ; ಚಮತ್ಕೃತಿ: ಚಮತ್ಕಾರ, ಸೋಜಿಗ, ವಿಸ್ಮಯ; ಅಂಬು: ಬಾಣ; ಹರಹು: ವಿಸ್ತಾರ, ವೈಶಾಲ್ಯ; ಹೇರು: ಹೊರೆ, ಭಾರ; ದಳಪತಿ: ಸೇನಾಧಿಪತಿ; ಸೋನೆ: ಮಳೆ, ವೃಷ್ಟಿ; ಶರಸೋನೆ: ಬಾಣಗಳ ಮಳೆ; ಸಾರ: ತಿರುಳು, ಗುಣ; ದೊರೆ: ರಾಜ; ಸುಯ್ದಾನ: ರಕ್ಷಣೆ, ಕಾಪು; ಆದಿ: ಮುಂತಾದ; ನಿರೀಕ್ಷಿಸು: ತಾಳು; ತಾಗು: ಮುಟ್ಟು; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸುರನದೀಸುತನ್+ಎಸುಗೆ +ದ್ರೋಣನ
ಶರಚಮತ್ಕೃತಿ +ಕರ್ಣನಂಬಿನ
ಹರಹು +ಹೇರಿತು +ದಳಪತಿಯ +ಶರಸೋನೆ +ಸಾರವಲಾ
ದೊರೆಯ +ಸುಯ್ದಾನದಲಿ +ಸಾತ್ಯಕಿ
ಯಿರಲಿ +ಧೃಷ್ಟದ್ಯುಮ್ನ +ಭೀಮಾ
ದ್ಯರ +ನಿರೀಕ್ಷಿಸ +ಹೇಳೆನುತ+ ತಾಗಿದನು+ ಕಲಿ+ಪಾರ್ಥ

ಅಚ್ಚರಿ:
(೧) ಶಲ್ಯನ ಶಕ್ತಿ – ಸುರನದೀಸುತನೆಸುಗೆ ದ್ರೋಣನ ಶರಚಮತ್ಕೃತಿ ಕರ್ಣನಂಬಿನ ಹರಹು ಹೇರಿತು ದಳಪತಿಯ

ನಿಮ್ಮ ಟಿಪ್ಪಣಿ ಬರೆಯಿರಿ