ಪದ್ಯ ೪೨: ಯುದ್ಧದಲ್ಲಿ ಯಾವ ರೀತಿಯ ಮಂಜು ಆವರಿಸಿತು?

ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ (ಶಲ್ಯ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಲ್ಯನ ಬಾಣಗಳನ್ನು ಲೆಕ್ಕಿಸದೆ ಭೀಮನ ದಳದ ಆನೆಗಳು ಮುಮ್ದಾದವು. ಸಾತ್ಯಕಿ ಉಪಪಾಂಡವರು ಮೊದಲಾದ ಯುದ್ಧ ನಿಪುಣರೂ ಪ್ರಖ್ಯಾತರೂ ಆದ ವೀರರು ಯುದ್ಧಕ್ಕೆ ಬರಲು ಧೂಳಿನ ಮಂಜು ಕವಿಯಿತು.

ಅರ್ಥ:
ಧರಣಿಪತಿ: ರಾಜ; ಕರಿಘಟೆ: ಆನೆಗಳ ಗುಂಪು; ಇಟ್ಟಣಿಸು: ದಟ್ಟವಾಗು, ಒತ್ತಾಗು; ಮೋಹರ: ಯುದ್ಧ; ರಥ: ಬಂಡಿ; ಸುತ: ಮಗ; ಬಿರುದು: ಗೌರವ ಸೂಚಕ ಹೆಸರು; ಭಟ: ಸೈನಿಕ; ಔಕು: ನೂಕು; ರಾಯ: ರಾಜ; ಧುರ: ಯುದ್ಧ, ಕಾಳಗ; ಧೀವಸಿ: ಸಾಹಸ, ವೀರ; ನಿಹಾರ: ಮಂಜು; ಉರವಣೆ: ಆತುರ, ಆಧಿಕ್ಯ; ಅಂಬು: ಬಾಣ; ಮಳೆ: ವರ್ಷ; ಮನ್ನಿಸು: ಅಂಗೀಕರಿಸು, ಒಪ್ಪು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಕರಿಘಟೆಗಳ್+ಇಟ್ಟಣಿಸಿದವು +ಮೋ
ಹರಿಸಿದವು+ ಸಾತ್ಯಕಿಯ +ರಥವಾ +ದ್ರೌಪದೀ+ಸುತರ
ಬಿರುದ +ಭಟರ್+ಔಕಿದರು +ರಾಯನ
ಧುರದ +ಧೀವಸಿಗಳು +ನಿಹಾರದಲ್
ಉರವಣಿಸಿದರು +ಶಲ್ಯನ್+ಅಂಬಿನ +ಮಳೆಯ +ಮನ್ನಿಸದೆ

ಅಚ್ಚರಿ:
(೧) ರೂಪಕದ ಪ್ರಯೋಗ – ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು

ನಿಮ್ಮ ಟಿಪ್ಪಣಿ ಬರೆಯಿರಿ