ಪದ್ಯ ೨೭: ದುರ್ಯೋಧನನು ಎಷ್ಟು ಸೈನ್ಯದ ಜೊತೆ ಬಂದನು?

ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ (ಶಲ್ಯ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಮೂರುಕೋಟಿ ಪದಾತಿಗಳೊಡನೆ ಕದನಕ್ಕೆ ಬಂದನು. ಎರದು ಲಕ್ಷ ಕುದುರೆಗಲನ್ನೇರಿ ರಾವುತರು ಅಬ್ಬರಿಸುತ್ತಾ ಮುನ್ನುಗ್ಗಿದರು. ಕುರುಸೇನೆಯು ವಿರೋಧಿಸೇನೆಯನ್ನು ತಡೆದು ಹೊಡೆಯಿತು. ಅವರು ನಿಮ್ಮವರನ್ನು ಬಡಿದರು. ಚತುರಂಗ ಸೇನೆಯು ರಕ್ತದಿಂದ ತೋದು ಹೋಯಿತು.

ಅರ್ಥ:
ಕೋಟಿ: ಅಸಂಖ್ಯಾತ; ಪದಾತಿ: ಸೈನಿಕ; ದೊರೆ: ರಾಜ; ಉಬ್ಬೇರು: ಉತ್ಸಾಹದಿಂದ ಮೇಲೆ ಬೀಳು; ರಾವುತ: ಕುದುರೆ ಮೇಲೆ ಕೂತು ಯುದ್ಧ ಮಾಡುವವ; ಹೊಕ್ಕು: ಸೇರು; ತೇಜಿ: ಕುದುರೆ; ಕೀರು: ಕೂಗು, ಅರಚು; ಹೊಯ್ದು: ಹೊಡೆ; ರುಧಿರಜಲ: ರಕ್ತದ ನೀರು; ಅದ್ದು: ತೋಯು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಒಗು: ಹೊರಹೊಮ್ಮುವಿಕೆ, ಉತ್ಸಾಹ;

ಪದವಿಂಗಡಣೆ:
ಮೂರು +ಕೋಟಿ +ಪದಾತಿಯಲಿ +ದೊರೆ
ಏರಿದನಲೈ +ನಿನ್ನ +ಮಗನ್
ಉಬ್ಬೇರಿ+ರಾವ್ತರು+ ಹೊಕ್ಕರ್+ಎರಡೇ+ ಲಕ್ಕ+ ತೇಜಿಯಲಿ
ಕೀರಿದರು +ಮಾರೊಡ್ಡನ್+ಇವರವರ್
ಏರಿ +ಹೊಯ್ದರು +ನಿನ್ನವರನ್+ಒಗುವ್
ಏರ +ಬಾಯ್ಗಳ +ರುಧಿರಜಲವ್+ಅದ್ದುದು +ಚತುರ್ಬಲವ

ಅಚ್ಚರಿ:
(೧) ರಕ್ತವನ್ನು ಹೇಳಲು – ರುಧಿರಜಲ ಪದದ ಪ್ರಯೋಗ
(೨) ಏರಿ, ಉಬ್ಬೇರಿ, ಕೀರಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ