ಪದ್ಯ ೨೫: ಶಲ್ಯನ ರಕ್ಷಣೆಗೆ ಯಾರು ಬಂದರು?

ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ (ಶಲ್ಯ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶತ್ರುಗಳು ಸೇನಾಧಿಪತಿಯನ್ನು ಮುತ್ತಿದ್ದಾರೆ. ಬೆಂಬಲಕ್ಕೆ ಸೈನ್ಯವನ್ನು ಬರ ಹೇಳು, ಎನ್ನುತ್ತಾ ಕೋಪೋದ್ರಿಕ್ತ ಮುಖದಿಂದ ಹುಬ್ಬುಗಳನ್ನು ಗಂಟಿಟ್ಟು, ಬಾಣವನ್ನು ಕಿವಿವರೆಗೆ ಸೇದಿದ ಅಶ್ವತ್ಥಾಮನು ಯುದ್ಧಕ್ಕಿಳಿದನು. ಶಕುನಿಯು ಮುನ್ನುಗ್ಗಿದನು. ಕರ್ಣನ ಮಕ್ಕಳು ಯುದ್ಧಕ್ಕಿಳಿದರು.

ಅರ್ಥ:
ದಳಪತಿ: ಸೇನಾಧಿಪತಿ; ಮುಕ್ಕುರು: ಕವಿ, ಮುತ್ತು, ಆವರಿಸು; ಪಡಿಬಲ: ವೈರಿ ಸೈನ್ಯ; ಬರಹೇಳು: ಆಗಮಿಸು; ಚಾಚು: ಹರಡು; ಹಿಳುಕು: ಬಾಣದ ಹಿಂಭಾಗ; ಹಿಳುಕುಗೆನ್ನೆ: ಬಾಣದ ಗರಿಯಿಂದ ಕೂಡಿದ ಕೆನ್ನೆ; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ಬಿಗಿ: ಗಟ್ಟಿಯಾದ; ಹುಬ್ಬು: ಕಣ್ಣಿನ ಮೇಲಿನ ಕೂದಲು; ಕಳಶಜ: ದ್ರೋಣ; ಸುತ: ಮಗ; ಔಕು: ಒತ್ತು; ಅಳವಿ: ಯುದ್ಧ; ಇಟ್ಟಳಿಸು: ದಟ್ಟವಾಗು, ಒತ್ತಾಗು; ಆತ್ಮಜ: ಮಗ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ದಳಪತಿಯ +ಮುಕ್ಕುರುಕಿದರು +ಪಡಿ
ಬಲವ +ಬರಹೇಳೆನುತ +ಚಾಚಿದ
ಹಿಳುಕು+ಕೆನ್ನೆಯ +ಹೊಗರು+ಮೋರೆಯ +ಬಿಗಿದ +ಹುಬ್ಬುಗಳ
ಕಳಶಜನ +ಸುತನ್+ಔಕಿದನು +ಕೃಪನ್
ಅಳವಿ+ಕೊಟ್ಟನು +ಸುಬಲಸುತನ್
ಇಟ್ಟಳಿಸಿದನು +ಕರ್ಣಾತ್ಮಜರು +ಕೈಕೊಂಡರ್+ಒಗ್ಗಿನಲಿ

ಅಚ್ಚರಿ:
(೧) ಕೆನ್ನೆ, ಮೋರೆ, ಹುಬ್ಬು – ಕೋಪವನ್ನು ಸೂಚಿಸಲು ಬಳಸಿದ ಮುಖದ ಅಂಗಗಳು
(೨) ಕಳಶಜನಸುತ, ಸುಬಲಸುತ – ಸುತ ಪದದ ಬಳಕೆ
(೩) ಸುತ, ಆತ್ಮಜ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ