ಪದ್ಯ ೨೧: ಶಲ್ಯನೆದುರು ಯಾರು ಬಂದು ನಿಂತರು?

ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರಭೂಪತಿಯ (ಶಲ್ಯ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ವೈರಿಸೇನೆಯು ಒಮ್ಮುಖವಾಗಿ ಅತಿವೇಗದಿಂದ ನುಗ್ಗಿತು. ಗರ್ಜಿಸುತ್ತಾ ಚತುರತೆಯಿಂದ ದಾಳಿ ಮಾಡುತ್ತಾ ಆಚೀಚೆಗೆ ಹಾರುತ್ತಾ ಗತ್ತನ್ನು ತೋರಿಸಿತು. ಭೀಮನ ಸೇನೆಯ ಬೆಂಬಲದಿಂದ ಧರ್ಮಜನು ಮುಂದುವರಿದನು. ನಕುಲ ಸಹದೇವರ ಜೋಡಿ ರಥಗಳು ಶಲ್ಯನ ಮುಂದಕ್ಕೆ ಬಂದು ನಿಂತವು.

ಅರ್ಥ:
ಕವಿ: ಆವರಿಸು; ಸೂಠಿ: ವೇಗ; ರಿಪು: ವೈರಿ; ನಿವಹ: ಗುಂಪು; ನಿಬ್ಬರ: ಅತಿಶಯ, ಹೆಚ್ಚಳ; ಅಬ್ಬರ: ಆರ್ಭಟ; ಶರ: ಬಾಣ; ಲವಣಿ: ಕಾಂತಿ; ಲಾವಣಿ: ಗೇಣಿ; ಲಂಬ: ದೊಡ್ಡದಾದ; ಲಂಘನ: ಹಾರುವಿಕೆ, ಜಿಗಿತ; ಪವನಜ: ಭೀಮ; ಪಡಿಬಲ: ವೈರಿಸೈನ್ಯ; ಔಕು: ಒತ್ತು; ಅವನಿಪತಿ: ರಾಜ; ಸವಡಿ: ಜೊತೆ, ಜೋಡಿ; ರಥ: ಬಂಡಿ; ಸಮ್ಮುಖ: ಎದುರು; ಬಿಟ್ಟವು: ಬಿಡು; ಭೂಪತಿ: ರಾಜ;

ಪದವಿಂಗಡಣೆ:
ಕವಿದುದ್+ಒಂದೇ +ಸೂಠಿಯಲಿ +ರಿಪು
ನಿವಹ +ನಿಬ್ಬರದ್+ಅಬ್ಬರದ +ಶರ
ಲವಣಿಗಳ +ಲಾವಣಿಗೆಗಳ +ಲಂಬನದ +ಲಂಘನದ
ಪವನಜನ+ ಪಡಿಬಲದಲ್+ಔಕಿದನ್
ಅವನಿಪತಿ+ ಸಹದೇವ +ನಕುಲರ
ಸವಡಿರಥ +ಸಮ್ಮುಖಕೆ +ಬಿಟ್ಟವು +ಮಾದ್ರ+ಭೂಪತಿಯ

ಅಚ್ಚರಿ:
(೧) ಲ ಕಾರದ ಸಾಲು ಪದಗಳು – ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ
(೨) ಅವನಿಪತಿ, ಭೂಪತಿ – ಸಮಾನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ