ಪದ್ಯ ೯: ಕೌರವ ಸೇನೆಯು ಯಾವ ಆದೇಶದ ಮೇಲೆ ಸಿದ್ಧಗೊಂಡಿತು?

ಶಕುನಿ ಮೋಹರಿಸಿದನು ಸಮಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ (ಶಲ್ಯ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಣರಂಗದ ಒಂದು ಕಡೆ ಶಕುನಿಯು ಸೈನ್ಯದೊಡನೆ ನಿಂತನು. ಸಂಶಪ್ತಕರ ಬಲ ಇನ್ನೊಂದು ಕಡೆ ನಿಂತಿತು. ಕೃಪ, ಕೃತವರ್ಮ, ಅಶ್ವತ್ಥಾಮರು ಒಂದು ಪಕ್ಕದಲ್ಲಿ ನಿಂತರು. ನಮ್ಮ ಸೇನೆಯೆಲ್ಲವೂ ಶಲ್ಯನ ಹೇಳಿಕೆಯಂತೆ ಸಿದ್ಧವಾಗಿ ನಿಂತಿತು.

ಅರ್ಥ:
ಮೋಹರ: ಯುದ್ಧ; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವವರು; ಒದಗು: ಲಭ್ಯ; ಬಾಹೆ: ಪಕ್ಕ, ಪಾರ್ಶ್ವ; ಸಕಲ: ಎಲ್ಲಾ; ಬಲ: ಶಕ್ತಿ; ಹೇಳಿಕೆ: ಮಾತು; ಒಯ್ಯಾರ: ಚೆಲುವು; ನಿಕರ: ಗುಂಪು; ತಳಿತ: ಚಿಗುರಿದ; ತರ: ಓಳಿ, ಕ್ರಮ, ಗುಂಪು; ಕಳ:ರಣರಂಗ; ಮೂಲೆ: ಕೊನೆ, ತುದಿ;

ಪದವಿಂಗಡಣೆ:
ಶಕುನಿ+ ಮೋಹರಿಸಿದನು +ಸಮಸ
ಪ್ತಕರು +ಬೇರೊಡ್ಡಿದರು ಕೃತವ
ರ್ಮಕ ಕೃಪ+ಅಶ್ವತ್ಥಾಮರ್+ಒದಗಿದರೊಂದು +ಬಾಹೆಯಲಿ
ಸಕಲ+ ಬಲ +ಮಾದ್ರೇಶ್ವರನ +ಹೇ
ಳಿಕೆಯಲ್+ಒಯ್ಯಾರಿಸಿತು +ಕುರುಬಲ
ನಿಕರ +ತಳಿತುದು +ತರವಿಡಿದು +ಕಳನೊಂದು +ಮೂಲೆಯಲಿ

ಅಚ್ಚರಿ:
(೧) ಬಾಹೆಯಲಿ, ಮೂಲೆಯಲಿ – ಪ್ರಾಸ ಪದ
(೨) ತ ಕಾರದ ಜೋಡಿ ಪದ – ತಳಿತುದು ತರವಿಡಿದು

ನಿಮ್ಮ ಟಿಪ್ಪಣಿ ಬರೆಯಿರಿ