ಪದ್ಯ ೩೧: ಯಾರಿಂದ ಶಲ್ಯನನ್ನು ಗೆಲ್ಲಲು ಸಾಧ್ಯ?

ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೋಪ
ಇರಿವಡಾ ಮಾದ್ರೇಶನದು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ (ಶಲ್ಯ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನಿಂದ ಶಲ್ಯನನ್ನು ಗೆಲ್ಲುವುದು ಅಸಾಧ್ಯ. ಭೀಮನ ಶಕ್ತಿ ಶಲ್ಯನನ್ನು ನೋಯಿಸಲಾರದು. ನಕುಲನು ಶಲ್ಯನನ್ನು ನಿಭಾಯಿಸಲಾರ. ಸಹದೇವನ ಆಟೋಪವು ಶಲ್ಯನಿದಿರು ನಡೆಯುವುದಿಲ್ಲ. ಶಲ್ಯನೊಡನೆ ಯುದ್ಧಮಾಡಲು ಅವನನ್ನು ಸಂಹರಿಸಲು ನಿನಗೆ ಮಾತ್ರ ಸಾಧ್ಯ, ಏಕೆಂದರೆ ಧರ್ಮಿಷ್ಠನಾದ ನಿನ್ನನ್ನು ತಡೆದು ಯುದ್ಧಮಾಡಿದವರು ನಾಶಹೊಂದುತ್ತಾರೆ.

ಅರ್ಥ:
ಹರಿ: ಸೀಳು; ಎರವು: ದೂರವಾಗುವಿಕೆ; ನೋವು: ಪೆಟ್ಟು; ಹೊರಿಗೆ: ಭಾರ, ಹೊರೆ; ಒದಗು: ಲಭ್ಯ, ದೊರೆತುದು; ಸೈರಿಸು: ತಾಳು, ಸಹನೆ; ಆಟೋಪ: ಆವೇಶ; ಇರಿ: ಚುಚ್ಚು; ನೆರೆ: ಗುಂಪು; ಮುರಿ: ಸೀಳು; ತರುಬು: ತಡೆ, ನಿಲ್ಲಿಸು; ಕಷ್ಟ: ಕಠಿಣ; ನಗು: ಹರ್ಷ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಹರಿಯದ್+ಅರ್ಜುನನಿಂದ +ಭೀಮನನ್
ಎರವಣಿಗೆ +ನೋಯಿಸದು +ನಕುಲನ
ಹೊರಿಗೆ+ಒದಗದು +ಸೈರಿಸದು +ಸಹದೇವನ್+ಆಟೋಪ
ಇರಿವಡಾ +ಮಾದ್ರೇಶನದು +ನೆರೆ
ಮುರಿವಡೆಯು +ನಿನಗಹುದು +ನಿನ್ನನು
ತರುಬಿದವರೇ +ಕಷ್ಟರೆಂದನು +ನಗುತ +ಮುರವೈರಿ

ಅಚ್ಚರಿ:
(೧) ನ ಕಾರದ ಸಾಲು ಪದ – ನೆರೆಮುರಿವಡೆಯು ನಿನಗಹುದು ನಿನ್ನನು
(೨) ಹರಿ, ಇರಿ, ಮುರಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ