ಪದ್ಯ ೨೫: ಪಟ್ಟಾಭಿಷೇಕದ ನಂತರ ಕೌರವನ ಸ್ಥಿತಿ ಹೇಗಿತ್ತು?

ಆದುದುತ್ಸವ ಕರ್ಣಮರಣದ
ಖೇದವಕ್ಕಿತು ಹಗೆಗೆ ಕಾಲ್ವೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೂಗಿಗೆ ಕದಪ ಹೊಯ್ದನು ನಿನ್ನ ಮಗನೆಂದ (ಶಲ್ಯ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಪಟ್ಟಾಭಿಷೇಕವಾಗಲು, ಕೌರವನಿಗೆ ಕರ್ಣಾವಸಾನದಿಮ್ದಾಗುವ ದುಃಖವು ಮಾಯವಾಯಿತು. ಶತ್ರುಗಳು ಬತ್ತಿಸಿ ಕಾಲುಹೊಳೆಯಾಗಿಸಿದ್ದ ವೀರರಸವು ಸಮುದ್ರವಾಯಿತು. ಹೆಮ್ಮೆ ಹಬ್ಬಿತು. ಆಶೆಯ ಬೀಜ ಮೊಳೆಯಿತು. ಮೂಗನ್ನು ಕಳೆದುಕೊಂಡಂತಾಗಿದ್ದ ನಾಚಿಕೆಯ ಕೆನ್ನೆಗೆ ಹೊಡೆದನು.

ಅರ್ಥ:
ಉತ್ಸವ: ಸಮಾರಂಭ; ಮರಣ: ಸಾವು; ಖೇದ: ದುಃಖ; ಹಗೆ: ವೈರ; ಹೊಳೆ: ನದಿ, ತೊರೆ; ವೀರ: ಶೂರ; ಅಬ್ಧಿ: ಸಾಗರ; ನೆಲೆ: ಸ್ಥಾನ; ತಪ್ಪು: ಸುಳ್ಳಾಗು; ನಿಮಿಷ: ಕ್ಷಣಮಾತ್ರ; ಬೀದಿ: ಮಾರ್ಗ; ಬಿಂಕ: ಸೊಕ್ಕು; ನನೆ: ಮೊಗ್ಗು; ಬೀಜ: ಧಾನ್ಯದ ಕಾಳು; ಲಜ್ಜೆ: ನಾಚಿಕೆ, ಸಿಗ್ಗು; ಮೂಗು: ನಾಸಿಕ; ಕದಪ: ಗಲ್ಲ; ಹೊಯ್ದು: ಹೊಡೆ; ಮಗ: ಸುತ;

ಪದವಿಂಗಡಣೆ:
ಆದುದ್+ಉತ್ಸವ +ಕರ್ಣ+ಮರಣದ
ಖೇದವಕ್ಕಿತು +ಹಗೆಗೆ +ಕಾಲ್ವೊಳೆ
ಯಾದ +ವೀರ+ರಸಾಬ್ಧಿ +ನೆಲೆ+ತಪ್ಪಿತ್ತು +ನಿಮಿಷದಲಿ
ಬೀದಿವರಿದುದು +ಬಿಂಕ +ನನೆಕೊನೆವ್
ಓದುದ್+ಆಶಾಬೀಜ +ಲಜ್ಜೆಯ
ಹೋದ +ಮೂಗಿಗೆ +ಕದಪ+ ಹೊಯ್ದನು +ನಿನ್ನ +ಮಗನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಕಾಲ್ವೊಳೆಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ

ನಿಮ್ಮ ಟಿಪ್ಪಣಿ ಬರೆಯಿರಿ