ಪದ್ಯ ೧೦: ದುರ್ಯೋಧನನ ಸ್ಥಿತಿ ಹೇಗಿತ್ತು?

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಲದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ (ಶಲ್ಯ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪನ್ನೀರನ್ನು ದೊರೆಯ ಕಣ್ಣುಗಳಿಗೆ ಚುಮುಕಿಸಿ, ಹಿಡಿದೆತ್ತಿ ಕೂಡಿಸಿದರೆ, ದುರ್ಯೋಧನನು ಏನಪ್ಪಾ ಕರ್ಣ ಎಂದು ಕಣ್ಣುತೆರೆದು, ಥಟ್ಟನೆ ನೀಂತು ಕರ್ಣ, ರಾತ್ರಿಯಾಯಿತು ಸೈನ್ಯವನ್ನು ಪಾಳೆಯಕ್ಕೆ ಕಳುಹಿಸು ಎನ್ನಲು, ಶೋಕವು ಮತ್ತೆ ಹೆಚ್ಚಾಗಿ ಕಣ್ಣುಮುಚ್ಚಿ ಮೂರ್ಛಿತನಾದನು.

ಅರ್ಥ:
ತಳಿ: ಚಿಮುಕಿಸು, ಸಿಂಪಡಿಸು; ಪನ್ನೀರು: ತಂಪಾದ ನೀರು; ಅಕ್ಷಿ: ಕಣ್ಣು; ಚಳೆ: ಸಿಂಪಡಿಸುವುದು, ಚಿಮುಕಿಸುವುದು; ಹಿಡಿದು: ಗ್ರಹಿಸು; ಎತ್ತು: ಮೇಲೆ ತರು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಮಲಗು: ನಿದ್ರಿಸು; ಕಂದೆರೆ: ಕಣ್ಣನ್ನು ಬಿಡು; ಘಳಿಲು: ಒಮ್ಮೆಲೆ; ಎದ್ದು: ಮೇಲೇಳು, ಎಚ್ಚರಗೊಳ್ಳು; ತೆಗೆ: ಹೊರತರು; ದಳ: ಸೈನ್ಯ; ಇರುಳು: ರಾತ್ರಿ; ಶೋಕ: ದುಃಖ; ಕಳವಳ: ಗೊಂದಲ; ಅರೆ: ಅರ್ಧ; ಮುಚ್ಚು: ಮರೆಮಾಡು, ಹೊದಿಸು; ಕಣ್ಣು: ನಯನ; ಮೈಮರೆ: ಎಚ್ಚರತಪ್ಪು;

ಪದವಿಂಗಡಣೆ:
ತಳಿತಳಿದು +ಪನ್ನೀರನ್+ಅಕ್ಷಿಗೆ
ಚಳೆಯವನು +ಹಿಡಿದೆತ್ತಿ +ಗುರುಸುತ
ಮಲಗಿಸಿದಡ್+ಏನಯ್ಯ +ಕರ್ಣ +ಎನುತ್ತ +ಕಂದೆರೆದು
ಘಳಿಲನೆದ್ದನು +ಕರ್ಣ +ತೆಗೆಸೈ
ದಳವನ್+ಇರುಳಾಯ್ತೆಂದು +ಶೋಕದ
ಕಳವಳದಲ್+ಅರೆ+ಮುಚ್ಚುಗಣ್ಣಲಿ +ಮತ್ತೆ +ಮೈಮರೆದ

ಅಚ್ಚರಿ:
(೧) ಅಕ್ಷಿ, ಕಣ್ಣು – ಸಮಾನಾರ್ಥಕ ಪದ
(೨) ಕಂದೆರೆದು, ಮುಚ್ಚುಗಣ್ಣು – ಕಣ್ಣಿನ ಸ್ಥಿತಿಯನ್ನು ತೋರುವ ಪದಗಳು
(೩) ತಳಿತಳಿ, ಕಳವಳ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ