ಪದ್ಯ ೨: ಧೃತರಾಷ್ಟ್ರನು ಯಾರ ಬಗ್ಗೆ ವಿಚಾರಿಸಿದನು?

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ (ಶಲ್ಯ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಅಯ್ಯೋ ಸಂಜಯ ನೀನು ಹುಚ್ಚ, ಬಿರುಗಾಳಿ ಬೀಸಿದಾಗ ಕುಲಪರ್ವತಗಳ ಬ್ಸುಗೆ ಕಿತ್ತು ಅವು ಹಾರಿಹೋದವು, ಇನ್ನು ಕ್ಷುಲ್ಲಕವಾದ ದಿಬ್ಬಗಳ ಪಾಡೇನು? ಕರ್ಣನ ಸನ್ನಾಹವೇ ನಾಶವಾಗಿ ಹೋಯಿತು, ಇನ್ನು ಕೌರವನ ಪಾಡೇನು? ಶಲ್ಯನ ಗತಿಯೇನು? ಅದು ಹಾಗಿರಲಿ ಕೌರವಕುಲವನ್ನು ನಾಶಮಾಡಿದರೇ ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಮರುಳ: ಮೂಢ; ಗಾಳಿ: ಅನಿಲ, ವಾಯು; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಮಂಡಿಯೂರಿ ಕುಳಿತುಕೊಳ್ಳುವುದು; ಬಿಚ್ಚು: ಹೊರತರು; ಹುಲು: ಕ್ಷುಲ್ಲ; ಮೊರಡಿ: ದಿಣ್ಣೆ, ಗುಡ್ಡ; ಬಿಗು: ಗಟ್ಟಿ; ಬೀತುದು: ಮುಗಿಯಿತು; ಒಡ್ಡವಣೆ: ಗುಂಪು, ಸನ್ನಾಹ; ಪಾಡು: ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಸಾಕು: ನಿಲ್ಲಿಸು; ಸವರು: ನಾಶ; ಅನ್ವಯ: ವಂಶ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಮರುಳೆ +ಸಂಜಯ +ಗಾಳಿಯಲಿ +ಕುಲ
ಗಿರಿಯ +ಬೈಸಿಕೆ +ಬಿಚ್ಚಿದಡೆ +ಹುಲು
ಮೊರಡಿಗಳ +ಬಿಗುಹೇನು +ಬೀತುದು +ಕರ್ಣನ್+ಒಡ್ಡವಣೆ
ಕುರುಪತಿಯ +ಪಾಡೇನು +ಮಾದ್ರೇ
ಶ್ವರನ +ಮತ್ಸರವೇನು +ಸಾಕಂ
ತಿರಲಿ+ ಸವರಿತೆ+ ಕೌರವ+ಅನ್ವಯವ್+ಎಂದನ್+ಅಂಧನೃಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯಲಿ ಕುಲಗಿರಿಯ ಬೈಸಿಕೆ ಬಿಚ್ಚಿದಡೆ ಹುಲುಮೊರಡಿಗಳ ಬಿಗುಹೇನು

ನಿಮ್ಮ ಟಿಪ್ಪಣಿ ಬರೆಯಿರಿ