ಪದ್ಯ ೪೦: ನಾರಾಯಣಾಸ್ತ್ರವು ಏನನ್ನು ನೋಡಿತು?

ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಬೈಗುಳಿಗೆ ಹೆದರಿ ಧರ್ಮಜನು ನಿರಾಯುಧನಾಗಿ ಕುಳಿತಿದ್ದನು. ನಕುಲ, ಸಹದೇವ, ಶಿಖಂಡಿ, ಯುಯುತ್ಸು, ಸಾತ್ಯಕಿ ಸೃಂಜಯ ಮೊದಲಾದವರೆಲ್ಲಾ ಕೆನ್ನೆಯ ಮೇಲೆ ಕೈಯಿಟ್ಟು ಮುಸುಕು ಹಾಕಿಕೊಂಡು ಆಯುಧಗಳನ್ನೂ ತಮ್ಮ ಮುಂದೆ ಹರಡಿ ಇಟ್ಟುಕೊಂಡಿರುವುದನ್ನು ನಾರಾಯಣಾಸ್ತ್ರವು ನೋಡಿತು.

ಅರ್ಥ:
ಹರಿ: ಕೃಷ್ಣ; ಬಯ್ಗುಳು: ಜರಿದ ಮಾತು; ಬೆದರಿಸು: ಹೆದರಿಸು; ನೃಪ: ರಾಜ; ನಿರಾಯುಧ: ಆಯುಧವಿಲ್ಲದ ಸ್ಥಿತಿ; ಆದಿ: ಮುಂತಾದ; ಕರ: ಕೈ; ಕದಪು: ಕೆನ್ನೆ; ತಳಿತ: ಚಿಗುರಿದ; ಮುಸುಕು: ಹೊದಿಕೆ; ಮುರಿ: ಸೀಳು; ಮೋರೆ: ಮುಖ; ಮುಂದೆ: ಎದುರು; ಹರಹು: ವಿಸ್ತಾರ, ವೈಶಾಲ್ಯ; ತರತರ: ವಿಧವಿಧ; ಕೈದು: ಆಯುಧ; ಸುಭಟ: ಪರಾಕ್ರಮಿ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹರಿಯ +ಬಯ್ಗುಳು +ಬೆದರಿಸಲು+ ನೃಪ
ನಿರೆ +ನಿರಾಯುಧನಾಗಿ+ ಮಾದ್ರೇ
ಯರು +ಶಿಖಂಡಿ +ಯುಯುತ್ಸು +ಸಾತ್ಯಕಿ+ ಸೃಂಜಯಾದಿಗಳು
ಕರದ +ಕದಪಿನ +ತಳಿತ +ಮುಸುಕಿನ
ಮುರಿದ+ ಮೋರೆಯ +ಮುಂದೆ +ಹರಹಿದ
ತರತರದ +ಕೈದುಗಳ +ಸುಭಟರ +ಕಂಡುದ್+ಅಮಳಾಸ್ತ್ರ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಸುಕಿನ ಮುರಿದ ಮೋರೆಯ ಮುಂದೆ
(೨) ಬೇಜಾರು, ನಿರುತ್ಸಾಹ ಎಂದು ಹೇಳುವ ಪರಿ – ಮುರಿದ ಮೋರೆಯ

ನಿಮ್ಮ ಟಿಪ್ಪಣಿ ಬರೆಯಿರಿ