ಪದ್ಯ ೩೯: ನಾರಾಯಣಾಸ್ತ್ರವು ಯಾರನ್ನು ಹುಡುಕಿಕೊಂಡು ಹೋಯಿತು?

ಭೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ (ದ್ರೋಣ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿ ಆಯುಧವನ್ನೆಸೆದು ನಿಮ್ತ ಎಲ್ಲರನ್ನೂ ಬಾಣಾಗ್ನಿ ಆವರಿಸಿ ಭಲೇ ಭಂಡರಿರಾ ಎನ್ನುತ್ತಾ ಅವರನ್ನು ಕೈ ಬಿಟ್ಟಿತು, ಆ ಧರ್ಮಜನೆಲ್ಲಿ, ಅರ್ಜುನನೆಲ್ಲಿ, ಭೀಮನೆಲ್ಲಿ, ಮಾದ್ರಿಯ ಮಕ್ಕಳೆಲ್ಲಿ ಎನ್ನುತ್ತಾ ನಾರಾಯಣಾಸ್ತ್ರವು ಅವರನ್ನು ಹುಡುಕಿಕೊಂಡು ಹೋಯಿತು.

ಅರ್ಥ:
ಭೀತ: ಭಯ; ಕೈದು: ಆಯುಧ; ಅಖಿಳ: ಎಲ್ಲಾ; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಬಾಣ: ಸರಳು; ಅಗ್ನಿ: ಬೆಂಕಿ; ಬೆರಸು: ಕಲಸು; ಪೂತು: ಭಲೇ; ಭಂಡ: ನಾಚಿಕೆ, ಲಜ್ಜೆ; ಬಿಟ್ಟು: ತೊರೆ; ಬಾಣ: ಸರಳು; ಅರಿ: ವೈರಿ; ಭಟ: ಸೈನ್ಯ; ವಿಖ್ಯಾತ: ಪ್ರಸಿದ್ಧ; ಅನಿಲಸುತ: ಭೀಮ; ಸುತ: ಪುತ್ರ; ತನುಜ: ಮಗ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಭೀತ +ಕೈದುಗಳ್+ಅಖಿಳ+ದಳ +ಸಂ
ಘಾತವನು +ಬಾಣಾಗ್ನಿ +ಬೆರಸಿತು
ಪೂತು+ ಭಂಡರಿರ್+ಎನುತ +ಬಿಟ್ಟುದು +ಬಾಣವ್+ಅರಿ+ಭಟರ
ಆತನಾವೆಡೆ +ಧರ್ಮಜನು +ವಿ
ಖ್ಯಾತನ್+ಅರ್ಜುನನ್+ಅನಿಲಸುತ +ಮಾ
ದ್ರೀತನುಜರ್+ಎಂದೆನುತ +ಹೊಕ್ಕುದು +ರಾಜ +ಮೋಹರವ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ

ನಿಮ್ಮ ಟಿಪ್ಪಣಿ ಬರೆಯಿರಿ