ಪದ್ಯ ೩೮: ಪಾಂಡವರ ಸೇನೆಯು ಯಾವ ಉಪಾಯವನ್ನು ಅನುಸರಿಸಿದರು?

ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ (ದ್ರೋಣ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇನ್ನೇನು ಉದುರಲಿರುವ ಹೂವಿನ ತೊಟ್ಟೋ, ಬಿಟ್ಟಿ ಕೂಲಿಗಾಗಿ ಭಾರಹೊತ್ತ ತಲೆಗಳೋ, ನಿರ್ಮಲ ಚಿತ್ತನ ಕೋಪವೋ, ದಾನಿಯ ಆಭರಣಗಳೋ ಎಂಬಂತೆ ಶ್ರೀಕೃಷ್ಣನ ಮಾತು ಮುಗಿಯುವ ಮೊದಲೇ ಯೋಧರ ಕೈಗಳಲ್ಲಿದ್ದ ಆಯುಧಗಳು ಕೆಳಕ್ಕೆ ಬಿದ್ದವು. ಉಳಿಯುವ ಉಪಾಯದ ಕವಚವನ್ನು ಪಾಂಡವರ ಸೇನೆ ಧರಿಸಿತು.

ಅರ್ಥ:
ಕಳಿದ: ಉದುರು; ಹೂವು: ಪುಷ್ಪ; ತೊಡಬೆ: ತೊಟ್ಟು; ಕುಸಿ: ಬೀಳು; ತಲೆ: ಶಿರ; ಬಿಟ್ಟಿ: ವ್ಯರ್ಥ; ಭಾರ: ಹೊರೆ; ನಿರ್ಮಳ: ಶುದ್ಧ; ಚಿತ್ತ: ಮನಸ್ಸು; ಖತಿ: ಕೋಪ; ದಾನ: ನೀಡುವ ಸ್ವಭಾವ; ವ್ಯಸನ: ಗೀಳು, ಚಟ; ಒಡವೆ: ಆಭರಣ; ನಳಿನನಾಭ: ಕೃಷ್ಣ; ಮಾತು: ವಾಣಿ; ಹಿಂಚು: ಮುಗಿ, ಕೊನೆಗೊಳ್ಳು; ಕಳಚು: ಬೇರ್ಪಡಿಸು, ತೆಗೆ; ಕೈದು: ಆಯುಧ; ಕೈ: ಹಸ್ತ; ಉಪಾಯ: ಯುಕ್ತಿ; ಜೋಡು: ಜೊತೆ, ಜೋಡಿ; ತೊಟ್ಟು: ತೊಡು; ಸುತ: ಮಕ್ಕಳು; ಸೇನೆ: ಸೈನ್ಯ; ಲುಳಿ: ವೇಗ;

ಪದವಿಂಗಡಣೆ:
ಕಳಿದ+ ಹೂವಿನ +ತೊಡಬೆಯೋ +ಕುಸಿದ್
ತಲೆಯ +ಬಿಟ್ಟಿಯ +ಭಾರವೋ +ನಿ
ರ್ಮಳನ +ಚಿತ್ತದ +ಖತಿಯೊ +ದಾನ+ವ್ಯಸನಿ+ಒಡವೆಗಳೊ
ನಳಿನನಾಭನ +ಮಾತು +ಹಿಂಚಿತು
ಕಳಚಿದವು +ಕೈದುಗಳು +ಕೈಗಳ
ಲುಳಿ+ಉಪಾಯದ+ ಜೋಡ +ತೊಟ್ಟುದು +ಪಾಂಡುಸುತಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳಿದ ಹೂವಿನ ತೊಡಬೆಯೋ ಕುಸಿದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ

ನಿಮ್ಮ ಟಿಪ್ಪಣಿ ಬರೆಯಿರಿ