ಪದ್ಯ ೨೭: ಧೃಷ್ಟದ್ಯುಮ್ನನು ಸಾತ್ಯಕಿಗೆ ಏನು ಹೇಳಿದನು?

ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ (ದ್ರೋಣ ಪರ್ವ, ೧೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಸೆರೆಯಿಂದ ಕತ್ತಿಯನ್ನು ಹೊರಗೆಳೆದು, ಭೀಮ ಈ ಬಾಯಿಬಡಕನನ್ನು ಬಿಡು, ಅವನಿಗೆ ಕತ್ತಿಯನ್ನು ಕೊಡು, ಎಲವೋ ಸಾತ್ಯಕಿ, ಕೃಷ್ಣನಿಗೆ ಹೆದರಿ ನಾನು ಸುಮ್ಮನಿದ್ದೆ. ನೀನು ನನ್ನನ್ನು ನಿಂದಿಸುವೆಯಾ? ನಿನ್ನ ನಾಲಗೆಯನ್ನು ಹಿಂದಲೆಯಿಂದ ಹೊರಗೆಳೆಯುತ್ತೇನೆ ಎಂದು ವೀರಾವೇಶದಿಂದ ನುಡಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಒರೆ: ಉಜ್ಜು, ತಿಕ್ಕು; ಆಯುಧ: ಶಸ್ತ್ರ; ಅವ್ವಳಿಸು: ತಟ್ಟು, ತಾಗು; ಸುತ: ಮಗ; ಗಳಹ: ಬಾಯಿಬಡಕ; ಬಿಡು: ತೊರೆ; ಕೊಡು: ನೀಡು; ಖಂಡೆಯ: ಕತ್ತಿ; ಅಳುಕು: ಹೆದರು; ಸೈರಿಸು: ತಾಳ್ಮೆ; ದೊಠಾರ: ಶೂರ, ಕಲಿ; ನುಡಿ: ಮಾತು; ಹೆಡತಲೆ: ಹಿಂದಲೆ; ಅಲುಗು: ಅಳ್ಳಾಡು, ಅದುರು; ನಾಲಗೆ: ಜಿಹ್ವೆ;

ಪದವಿಂಗಡಣೆ:
ಸೆಳೆದನ್+ಒರೆಯಲಡ್+ಆಯುಧವನ್
ಅವ್ವಳಿಸಿದನು +ಪಾಂಚಾಲಸುತನ್+ಈ
ಗಳಹನನು +ಬಿಡು +ಭೀಮ +ಕೊಡು +ಸಾತ್ಯಕಿಯ +ಖಂಡೆಯವ
ಎಲವೊ +ಸಾತ್ಯಕಿ +ಕೃಷ್ಣ+ದೇವರಿಗ್
ಅಳುಕಿ +ಸೈರಿಸಿದರೆ +ದೊಠಾರಿಸಿ
ಗೆಲನುಡಿವೆ +ಹೆಡತಲೆ+ಅಲುಗಿವೆನು +ನಿನ್ನ +ನಾಲಗೆಯ

ಅಚ್ಚರಿ:
(೧) ಬಿಡು, ಕೊಡು – ಪ್ರಾಸ ಪದಗಳು
(೨) ಸಾತ್ಯಕಿಯನ್ನು ಗದರಿಸುವ ಪರಿ – ದೊಠಾರಿಸಿ ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ

ನಿಮ್ಮ ಟಿಪ್ಪಣಿ ಬರೆಯಿರಿ