ಪದ್ಯ ೬೪: ದ್ರೋಣನು ಸೇನೆಯ ಮೇಲೆ ಹೇಗೆ ಎಗರಿದನು?

ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಮ್ತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ (ದ್ರೋಣ ಪರ್ವ, ೧೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನು ಬಿಲ್ಲನ್ನು ಹಿಡಿದು ಹೆದೆಗೆ ಬಾನವನ್ನೇರಿಸಿ ಶತ್ರುಸೇನೆಗೆ ಇದಿರಾದನು. ಬಲೆ ಹರಿದ ಮೃಗ ಹೊರಬಂದು ಇಕ್ಕಟ್ಟಾದ ಗುಂಡಿಯಲ್ಲಿ ಬಿದ್ದಂತೆ ಯುದ್ಧತಾಮಸದಿಂದ ಮತಿಗೆಟ್ಟನು. ಮುನಿಗಳು ಬಂದು ಬೋಧಿಸಿ ಹೋದರೂ, ಜ್ಞಾನವನ್ನು ಮರೆವು ಆವರಿಸಲು ಪಾಂಡವ ಸೈನ್ಯ ಸಾಗರವನ್ನು ಸಂಹರಿಸಲು ಆರಂಭಿಸಿದನು.

ಅರ್ಥ:
ದುಡುಕು: ಆಲೋಚನೆ ಮಾಡದೆ ಮುನ್ನುಗ್ಗುವುದು; ಬಲು: ಹೆಚ್ಚು; ಸರಳ: ಬಾಣ; ಮಲೆತ: ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ; ಮಾರ್ಬಲ: ಶತ್ರು ಸೈನ್ಯ; ಬಲೆ: ಜಾಲ; ಕಳಚು: ಬೇರ್ಪಡಿಸು; ಮೃಗ: ಪ್ರಾಣಿ; ಬಿದ್ದು: ಬೀಳು; ಇರುಬು: ಇಕ್ಕಟ್ಟು ; ಕುಳಿ: ಗುಂಡಿ, ಗುಣಿ, ಹಳ್ಳ; ಮುನಿ: ಋಷಿ; ತಿಳಿವು: ಅರಿವು; ತೊಟ್ಟು: ಮೊದಲಾಗಿ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಮೊಗೆ: ಮಣ್ಣಿನ ಗಡಿಗೆ; ಸಾಗರ: ಸಮುದ್ರ;

ಪದವಿಂಗಡಣೆ:
ಬಿಲುದುಡುಕಿ +ಬಲುಸರಳ +ತಿರುವಾಯ್
ಗೊಳಿಸಿ +ಮಲೆತನು +ಮಾರ್ಬಲಕೆ +ಬಲೆ
ಕಳಚಿದರೆ+ ಮೃಗ +ಬಿದ್ದುದ್+ಇರುಬಿನ+ ಕುಳಿಯೊಳೆಂಬಂತೆ
ತಿಳುಹಿ +ಹೋದರು +ಮುನಿಗಳ್+ಈತನ
ತಿಳಿವು +ತೊಟ್ಟುದು +ಮರವೆಯನು+ ಮುಂ
ಕೊಳಿಸಿ +ಮೊಗೆದನು +ಮತ್ತೆ +ಪಾಂಡವ+ಸೈನ್ಯ+ಸಾಗರವ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮರವೆಯನು ಮುಂಕೊಳಿಸಿ ಮೊಗೆದನು ಮತ್ತೆ

ನಿಮ್ಮ ಟಿಪ್ಪಣಿ ಬರೆಯಿರಿ