ಪದ್ಯ ೩೭: ಮಂತ್ರಿಗಳು ಯಾವ ಅಭಿಪ್ರಾಯ ಪಟ್ಟರು?

ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲ್ಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು (ದ್ರೋಣ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನನ್ನು ತಡೆದು ನಿಲ್ಲಿಸುವವರೇ ಇಲ್ಲ. ಪಾಂಡವ ವೀರರೆಲ್ಲರೂ ಭಂಗಿತರಾದರು. ಯುದ್ಧದ ವಿಜಯಲಕ್ಷ್ಮಿ ಸುಯೋಧನನ ಕಡೆಗೆ ಸಂತೋಷದ ಕುಡಿನೋಟ ಬೀರಿದ್ದಾಳೆ. ಈಗ ಮುಮ್ದೆ ನಿಮ್ತು ಯುದ್ಧಮಾದುವವರಾರು? ನಾವು ಗೆಲ್ಲುವುದಾದರೂ ಹೇಗೆ? ಇದ್ದ ವಿಷಯವನ್ನು ದೊರೆಗೆ ಬಿನ್ನಹಮಾಡಿರೆಂದು ಎಲ್ಲಾ ಮಂತ್ರಿಗಳು ಹೇಳಿದರು.

ಅರ್ಥ:
ಅಂಗವಿಸು: ಬಯಸು; ಭಟ: ಸೈನಿಕ; ಭಂಗ: ಮುರಿಯುವಿಕೆ, ಚೂರು; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಸೊಗಸು: ಎಲುವು; ಕಡೆಗಣ್ಣು: ಓರೆನೋಟ; ಸೂಸು: ಎರಚು, ಚಲ್ಲು, ಚಿಮ್ಮು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಅಂಗ: ಭಾಗ; ಜಯ: ಗೆಲುವು; ಹದ: ಸ್ಥಿತಿ; ಅರಸ: ರಾಜ; ಬಿನ್ನಹ: ಕೋರಿಕೆ; ನಿಖಿಳ: ಎಲ್ಲಾ; ಮಂತ್ರಿ: ಸಚಿವ;

ಪದವಿಂಗಡಣೆ:
ಅಂಗವಿಸುವವರಿಲ್ಲ +ಭಟರಿಗೆ
ಭಂಗವಿಕ್ಕಿತು +ಕೌರವೇಂದ್ರಗೆ
ಸಂಗರದ +ಸಿರಿ +ಸೊಗಸಿನಲಿ +ಕಡೆಗಣ್ಣ+ ಸೂಸಿದಳು
ಮುಂಗುಡಿಯಲ್+ಇನ್ನಾರು +ನಮಗಾ
ವಂಗದಲಿ +ಜಯವೇನು +ಹದನ್+ಅರ
ಸಂಗೆ +ಬಿನ್ನಹ +ಮಾಡಿ+ಎಂದರು +ನಿಖಿಳ +ಮಂತ್ರಿಗಳು

ಅಚ್ಚರಿ:
(೧) ಅಂಗ, ಭಂಗ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸಂಗರದ ಸಿರಿ ಸೊಗಸಿನಲಿ

ನಿಮ್ಮ ಟಿಪ್ಪಣಿ ಬರೆಯಿರಿ