ಪದ್ಯ ೨೨: ಮಹಾರಥರು ಹೇಗೆ ಸೋಲನ್ನುಂಡಿದರು?

ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯವು ಘಾಸಿಯಾಯಿತು. ಧೂ, ಈ ದುರ್ಗತಿಯನ್ನು ಸುಡಲಿ ಎಂದು ಸುಭಟರು ದ್ರೋಣನನ್ನೆದುರಿಸಿ ಕಾದಿದರು. ಅಷ್ಟೇ ಅವರ ಸತ್ವ ತ್ರಾಣಗಳು ಅಲ್ಲಿ ಏನೂ ಮಾಡಲಿಲ್ಲ. ಮುನ್ನುಗ್ಗುವ ಬಾಣಗಳ ಸೊಗಡು ಹೊಯ್ದು ಅವರು ನಗೆಗೀಡಾದರು. ಮಹಾರಥರು ಇಂತಹ ಸೋಲು ಅಪಮಾನಗಳನ್ನು ಎಂದೂ ಕಂಡಿರಲಿಲ್ಲ.

ಅರ್ಥ:
ಘಾಸಿ: ಆಯಾಸ, ದಣಿವು; ಸೇನೆ: ಸೈನ್ಯ; ಸುಡು: ದಹಿಸು; ಸುಭಟ: ಪರಾಕ್ರಮ; ಇದಿರು: ಎದುರು; ಕಾದು: ಹೋರಾಟ, ಯುದ್ಧ; ಐಸೆ: ಅಷ್ಟು; ಬಳಿಕ: ನಮ್ತರ; ಸತ್ವ: ಶಕ್ತಿ, ಬಲ; ತ್ರಾಣ: ಕಾಪು, ರಕ್ಷಣೆ; ಸೂಸು: ಎರಚು, ಚಲ್ಲು; ಕಣೆ: ಬಾಣ; ಸೊಗಡು: ಕಂಪು, ವಾಸನೆ; ಹೊಯ್ದು: ಹೊಡೆ; ಹಾಸ: ಸಂತೋಷ; ಮಹಾರಥ: ಪರಾಕ್ರಮಿ; ಭಂಗ: ಮುರಿಯುವಿಕೆ; ನೃಪಾಲ: ರಾಜ; ಕೇಳು: ಹೇಳು;

ಪದವಿಂಗಡಣೆ:
ಘಾಸಿಯಾದುದು+ ಸೇನೆ +ಸುಡಲೆನು
ತಾ +ಸುಭಟರ್+ಇದಿರಾಗಿ +ಕಾದಿದರ್
ಐಸೆ +ಬಳಿಕೇನ್+ಅವರ +ಸತ್ವತ್ರಾಣವೇನಲ್ಲಿ
ಸೂಸು+ಕಣೆಗಳ +ಸೊಗಡು +ಹೊಯ್ದ್+ಉಪ
ಹಾಸಕೊಳಗಾದರು+ ಮಹಾರಥರ್
ಈಸು +ಭಂಗಕೆ +ಬಂದುದಿಲ್ಲ +ನೃಪಾಲ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೇನೆ ಸುಡಲೆನುತಾ ಸುಭಟರಿದಿರಾಗಿ

ನಿಮ್ಮ ಟಿಪ್ಪಣಿ ಬರೆಯಿರಿ