ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ನಿಮ್ಮ ಟಿಪ್ಪಣಿ ಬರೆಯಿರಿ