ಪದ್ಯ ೯: ಧರ್ಮಜನ ಮನಸ್ಥಿತಿ ಹೇಗಿತ್ತು?

ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧರಿಯದ
ತಳಿತ ಭೀತಿಗೆ ಕಾಲ್ವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹಶ್ರಮವನ್ನಾರಿಸಿಕೊಳ್ಳಲು ತಾಂಬೂಲವನ್ನು ಜರೆಯುತ್ತಾ ಅದರ ರಸದಲ್ಲಿ ಸ್ವಲ್ಪ ಸಮಾಧಾನವಾದರೂ ಮೇಲೆದ್ದು ಬರುವ ಆಯಾಸದಿಂದ ನೊಂದ, ನಟನೆಯ ನಗೆಯನ್ನು ಬೀರುವ, ಕಳವಳಗೊಂಡು ಕಣ್ಣುಗಳನ್ನು ತೆರೆದು ಮುಚ್ಚುವ, ಛಲ ಹಿಂಗಿ ಧೈರ್ಯವುಡುಗಿ ಭೀತಿ ತುಂಬಿ ಹರಿಯುತ್ತಿದ್ದ ಚಂಚಲ ಮನಸ್ಸಿನ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಹೊಳೆ: ಪ್ರಕಾಶ; ತಂಬುಲ: ಎಲೆ ಅಡಿಕೆ; ರಸ: ಸಾರ; ಮುಳುಗು: ಮೀಯು, ಕಾಣದಾಗು; ಮೂಡು: ತುಂಬು, ಹುಟ್ಟು; ಢಗೆ: ಕಾವು, ಧಗೆ; ತೊಡಹು: ಸೇರಿಕೆ; ಮೆಲುನಗೆ: ಮಂದಸ್ಮಿತ; ಕಳವಳ: ಗೊಂದಲ; ಮುಕ್ಕುಳಿಸು: ಹೊರಹಾಕು; ಆಲಿ: ಕಣ್ಣು; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಛಲ: ನೆಪ, ವ್ಯಾಜ; ವಿಡಾಯಿ: ಶಕ್ತಿ, ಆಡಂಬರ; ಧೈರ್ಯ: ಎದೆಗಾರಿಕೆ, ಕೆಚ್ಚು; ತಳಿತ: ಚಿಗುರು; ಭೀತಿ: ಭಯ; ಕಾಲ: ಸಮ್ಯ; ಅಳಿ: ನಾಶ; ಮನ: ಮನಸ್ಸು; ಭೂಪಾಲ: ರಾಜ; ಕಂಡು: ನೋಡು;

ಪದವಿಂಗಡಣೆ:
ಹೊಳೆಹೊಳೆದು +ತಂಬುಲದ +ರಸದಲಿ
ಮುಳುಗಿ +ಮೂಡುವ +ಢಗೆಯ+ ತೊಡೆಹದ
ಮೆಲುನಗೆಯ +ಕಳವಳವನ್+ಅರೆ+ ಮುಕ್ಕುಳಿಸಿದ್+ಆಲಿಗಳ
ಹಿಳಿದ +ಛಲದ +ವಿಡಾಯಿ +ಧರಿಯದ
ತಳಿತ +ಭೀತಿಗೆ +ಕಾಲವೊಳೆಯಾದ್
ಅಳಿಮನದ +ಭೂಪಾಲನ್+ಇರವನು +ಕಂಡನಾ +ಪಾರ್ಥ

ಅಚ್ಚರಿ:
(೧) ವೈರುಧ್ಯ ಭಾವನೆಗಳನ್ನು ವಿವರಿಸುವ ಪದ್ಯ – ಹೊಳೆಹೊಳೆದು ತಂಬುಲದ ರಸದಲಿ ಮುಳುಗಿ ಮೂಡುವ ಢಗೆಯ ತೊಡೆಹದ ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ

ನಿಮ್ಮ ಟಿಪ್ಪಣಿ ಬರೆಯಿರಿ