ಪದ್ಯ ೧೭: ಚಂದ್ರನು ಹೇಗೆ ಹೊಳೆದನು?

ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ (ದ್ರೋಣ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ವಿರಹಿಜನಗಳ ಎದೆಗಿಚ್ಚು, ಮನ್ಮಥನ ಪಟ್ಟಾಭಿಷೇಕಕ್ಕೆ (ನೀರು ತುಂಬಿದ) ಘಟ, ಕಮಲಗಳ ಕಗ್ಗೊಲೆಗಾರ, ಕುಮುದವನಕ್ಕೆ ವಿದೂಷಕ (ಚಂದ್ರ ಕುಮುದಗಳ ಪ್ರೀತಿಗೆ ಸಹಕಾರಿ), ಮನ್ಮಥನ ಗುರಾಣಿ, ವಿಲಾಸಿನಿಯರ ಮನೋರಥ ಫಲ ಎನ್ನುವಂತೆ ಚಂದ್ರನು ಉದಯಪರ್ವತದ ಚಾವಡಿಯಲ್ಲಿ ಹೊಳೆದನು.

ಅರ್ಥ:
ವಿರಹಿ:ವಿಯೋಗಿ; ಜನ: ಮನುಷ್ಯ; ಕಿಚ್ಚು: ಬೆಂಕಿ, ಅಗ್ನಿ; ಮನುಮಥ: ಕಾಮದೇವ; ಅರಸು: ರಾಜ; ಅಭಿಷೇಕ: ಮಂಗಳಸ್ನಾನ; ಘಟ: ದೇಹ; ತಾವರೆ: ಕಮಲ; ಕಗ್ಗೊಲೆ: ಸಾಯಿಸು; ಉತ್ಪಳ: ಕನ್ನೈದಿಲೆ; ವಿದೂಷಕ: ಹಾಸ್ಯದ, ತಮಾಷೆಯ; ಹರ: ಶಂಕರ; ಹಗೆ: ವೈರತ್ವ; ಅಡ್ಡಣ: ನಡುವೆ; ವಿಳಾಸಿನಿ: ಒಯ್ಯಾರಿ, ಬೆಡಗಿ; ಮನೋರಥ: ಆಸೆ, ಬಯಕೆ; ಫಲ: ಪ್ರಯೋಜನ; ಮಿಗೆ: ಹೆಚ್ಚು; ಮೆರೆ: ಹೊಳೆ, ಪ್ರಕಾಶಿಸು; ಉದಯಾಚಲ: ಪೂರ್ವದ ಬೆಟ್ಟ; ಚಾವಡಿ: ಸಭಾಸ್ಥಾನ; ಸುಧಾಸೂತಿ: ಕ್ಷೀರಸಾಗರದಲ್ಲಿ ಹುಟ್ಟಿದವನು, ಚಂದ್ರ;

ಪದವಿಂಗಡಣೆ:
ವಿರಹಿಜನದ್+ಎದೆ+ಕಿಚ್ಚು +ಮನುಮಥನ್
ಅರಸುತನದ್+ಅಭಿಷೇಕ+ಘಟ+ ತಾ
ವರೆಯ +ಕಗ್ಗೊಲೆಕಾರನ್+ಉತ್ಪಳವನ +ವಿದೂಷಕನು
ಹರನ+ ಹಗೆ+ಅಡ್ಡಣ +ವಿಳಾಸಿನಿ
ಯರ +ಮನೋರಥಫಲವ್+ಎನಲು +ಮಿಗೆ
ಮೆರೆದನ್+ಉದಯಾಚಲದ +ಚಾವಡಿಯಲಿ +ಸುಧಾಸೂತಿ

ಅಚ್ಚರಿ:
(೧) ಚಂದ್ರನನ್ನು ಹಲವು ರೀತಿಯಲ್ಲಿ ಕರೆದಿರುವ ಪರಿ – ವಿರಹಿಜನದೆದೆಗಿಚ್ಚು, ವಿಳಾಸಿನಿಯರ, ತಾವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು ಮನೋರಥಫಲ

ನಿಮ್ಮ ಟಿಪ್ಪಣಿ ಬರೆಯಿರಿ