ಪದ್ಯ ೪೯: ಕರ್ಣನನ್ನು ಹೇಗೆ ಹೊಗಳಿದರು?

ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರೆತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು (ದ್ರೋಣ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕೌರವ ಯೋಧರು, ಬರಿಯ ಕಕುಲಾತಿಯಿಂದ ಕರ್ಣನ ಮರೆಹೊಕ್ಕೆವು, ಕರ್ಣನು ಇವನನ್ನು ತಡೆದು ನಿಲ್ಲಿಸಿದ. ಆದರೆ ಅವನ ಬಳಿಯಿರುವ ಶಕ್ತ್ಯಾಯುಧವೆಲ್ಲಿ ಎಂದು ಕೆಲವರು, ಮತ್ಸರವೇಕೆ ನಮ್ಮ ಪುಣ್ಯಹೀನವಾದರೆ ಕರ್ಣನೇನು ಮಾಡಲು ಸಾಧ್ಯ? ಘಟೋತ್ಕಚನ ಇರಿತಕ್ಕೆ ಹೆದರಿದ ನಾವೇ ಬಾರಿರರು ಎಂದು ಇನ್ನು ಕೆಲವರು ಮಾತನಾಡಿಕೊಂಡರು.

ಅರ್ಥ:
ಕಕ್ಕುಲಿತೆ: ಚಿಂತೆ; ಮರೆ: ಅಡ್ಡಿ, ತಡೆ; ಹೊಕ್ಕು: ಸೇರು; ತರುಬು: ತಡೆ, ನಿಲ್ಲಿಸು; ಶಕ್ತಿ: ಬಲ; ಕರುಬು: ಹೊಟ್ಟೆಕಿಚ್ಚು ಪಡು; ಅಕಟ: ಅಯ್ಯೋ; ಪುಣ್ಯ: ಸದಾಚಾರ; ಕೊರತೆ: ಕಡಮೆ; ಏಗು: ಸಾಗಿಸು; ಇರಿ: ಚುಚ್ಚು; ಅಂಜು: ಹೆದರು; ಬಾಹಿರ: ಹೊರಗೆ; ಉಳಿದ: ಮಿಕ್ಕ;

ಪದವಿಂಗಡಣೆ:
ಬರಿಯ +ಕಕ್ಕುಲಿತೆಯಲಿ +ಕರ್ಣನ
ಮರೆಯ +ಹೊಕ್ಕೆವು +ಕರ್ಣನ್+ಈತನ
ತರುಬಿದನಲಾ+ ಶಕ್ತಿಯಾವೆಡೆ+ಎಂದು+ ಕೆಲಕೆಲರು
ಕರುಬುತನವೇಕ್+ಅಕಟ +ಪುಣ್ಯದ
ಕೊರೆತೆ +ನಮ್ಮದು +ಕರ್ಣನೇಗುವನ್
ಇರಿತಕ್+ಅಂಜಿದ +ನಾವೆ +ಬಾಹಿರರ್+ಎಂದರ್+ಉಳಿದವರು

ಅಚ್ಚರಿ:
(೧) ಪುಣ್ಯದ ಮಹಿಮೆ – ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು

ನಿಮ್ಮ ಟಿಪ್ಪಣಿ ಬರೆಯಿರಿ