ಪದ್ಯ ೪೭: ಯುದ್ಧರಂಗವು ಯಾರಿಂದ ಆವರಿಸಿತು?

ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿದುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿನಂದನನೆನಲು ಬಲವಿರುಳಸುರಮಯವಾಯ್ತು (ದ್ರೋಣ ಪರ್ವ, ೧೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೈತ್ಯನು ಕಠಾರಿಯನ್ನು ಹಿಡಿದು ಕೌರವಸೈನ್ಯದಲ್ಲಿ ಚಾತುರ್ಯದಿಂದ ಓಡಾಡುತ್ತಿದ್ದನು. ಅವನ ಮೈಯಿಂದ ರಕ್ತದ ಹೊನಲು ಹರಿಯುತ್ತಿತ್ತು. ಸೈನಿಕರು ಯಾರಿವನು ಎಂದರೆ ಅಲ್ಲಿಯೇ ಹಿಡಿಂಬೆಯ ಮಗ, ಇವನಾರು ಎಂದರೆ ಭೀಮನ ಮಗ, ಇತ್ತ ಬಂದವರಾರು ಎಂದರೆ ಬಕಾರಿಯ ಮಗ ಎನ್ನುತ್ತಿರಲು ಯುದ್ಧರಂಗವೇ ಘಟೋತ್ಕಚ ಮಯವಾಯಿತು.

ಅರ್ಥ:
ಚಾರಿವರಿ: ಉಪಾಯದಿಂದ ಮುಂದುವರಿ; ದನುಜ: ರಾಕ್ಷಸ; ಮಡ್ಡು: ಸೊಕ್ಕು, ಅಹಂಕಾರ; ಕಠಾರಿ: ಚೂರಿ, ಕತ್ತಿ; ಅಸ್ತ್ರ: ಶಸ್ತ್ರ, ಆಯುಧ; ಧಾರಾಸಾರ: ವರ್ಷ; ಮೈ: ತನು; ನೆನೆ: ಒದ್ದೆಯಾಗು; ಹೊನಲು: ಪ್ರವಾಹ; ಅರುಣ: ಕೆಂಪು; ವಾರಿ: ನೀರು; ಬಲ: ಸೈನ್ಯ; ಅಸುರ: ರಾಕ್ಷಸ;

ಪದವಿಂಗಡಣೆ:
ಚಾರಿವರಿದನು +ದನುಜ +ಮಡ್ಡು +ಕ
ಠಾರಿಯಲಿ +ಕರ್ಣಾಸ್ತ್ರ+ಧಾರಾ
ಸಾರದಲಿ +ಮೈ+ನನೆದು +ಹೊನಲಿದುವ್+ಅರುಣ+ವಾರಿಯಲಿ
ಆರಿವನು +ಹೈಡಿಂಬನ್+ಈಚೆಯಲ್
ಆರು+ ಭೀಮಜನ್+ಇತ್ತಲಾರು +ಬ
ಕಾರಿನಂದನನ್+ಎನಲು +ಬಲವಿರುಳ್+ಅಸುರಮಯವಾಯ್ತು

ಅಚ್ಚರಿ:
(೧) ಘಟೋತ್ಕಚನನ್ನು ಕರೆದ ಪರಿ – ಹೈಡಿಂಬ, ಭೀಮಜ, ಬಕಾರಿನಂದನ

ನಿಮ್ಮ ಟಿಪ್ಪಣಿ ಬರೆಯಿರಿ