ಪದ್ಯ ೪೩: ಕರ್ಣ ಘಟೋತ್ಕಚರ ಯುದ್ಧವು ಹೇಗೆ ನಡೆಯಿತು?

ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ (ದ್ರೋಣ ಪರ್ವ, ೧೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಯುದ್ಧಸಾಧನಗಳು ಸವೆದು ಹೋಗಲು ಘಟೋತ್ಕಚನ ಕೋಪವು ಹೆಪ್ಪುಗಟ್ಟಿತು, ರಥದ ಸುತ್ತಲೂ ತಿರುಗಿ ಆಯುಧಗಳ ಮಳೆಯನ್ನು ಕರ್ಣನ ಮೇಲೆ ಸುರಿಸಿದನು. ಕರ್ಣನು ಅವನ್ನು ಕಡಿದು ಘಟೋತ್ಕಚನನ್ನು ಬಾಣಗಳಿಂದ ಹೊಡೆದನು.

ಅರ್ಥ:
ಸಮರ: ಯುದ್ಧ; ಸಾಧನ: ಗುರಿಮುಟ್ಟುವ ಪ್ರಯತ್ನ; ಸವೆ: ತೀರು, ಅಳಿ; ಕೋಪ: ಖತಿ; ತಿಮಿರ: ಅಂಧಕಾರ; ಗರಿಗಟ್ಟು: ಹೆಚ್ಚಾಗು; ವಿಕ್ರಮ: ಪರಾಕ್ರಮಿ; ಚಳಕ: ವೇಗ, ಶೀಘ್ರತೆ; ಹೇಳು: ತಿಳಿಸು; ರಥ: ಬಂಡಿ; ಬಳಸು: ಆವರಿಸುವಿಕೆ; ಸಮತಳಿಸು: ತೊಲಗಿಸು, ಅಣಿಗೊಳಿಸು; ಕೈದು: ಆಯುಧ; ಮಳೆ: ವರ್ಷ; ದ್ಯುಮಣಿ: ಸೂರ್ಯ; ತನಯ: ಮಗ; ಕರೆ: ಬೀಳು, ಆವರಿಸು; ನಿಮಿಷ: ಕ್ಷಣ; ಪರಿಹರಿಸು: ನಿವಾರಿಸು; ದೈತ್ಯ: ರಾಕ್ಷಸ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸಮರ+ಸಾಧನ +ಸವೆಯೆ +ಕೋಪದ
ತಿಮಿರ +ಗರಿಗಟ್ಟಿತು+ ಮಹಾವಿ
ಕ್ರಮನ +ಚಳಕವನ್+ಏನ +ಹೇಳುವೆ +ರಥದ +ಬಳಸಿನಲಿ
ಸಮತಳಿಸಿ +ಕೈದುಗಳ +ಮಳೆಯನು
ದ್ಯುಮಣಿತನಯನ +ಮೇಲೆ +ಕರೆದನು
ನಿಮಿಷಕದ +ಪರಿಹರಿಸಿ+ ದೈತ್ಯನನ್+ಎಚ್ಚನಾ +ಕರ್ಣ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಕೋಪದ ತಿಮಿರ ಗರಿಗಟ್ಟಿತು
(೨) ಕರ್ಣನನ್ನು ದ್ಯುಮಣಿತನಯ ಎಂದು ಕರೆದಿರುವುದು
(೩) ಬಾಣಗಳನ್ನು ಬಿಟ್ಟನೆಂದು ಹೇಳುವ ಪರಿ – ಕೈದುಗಳ ಮಳೆಯನು ದ್ಯುಮಣಿತನಯನ ಮೇಲೆ ಕರೆದನು

ನಿಮ್ಮ ಟಿಪ್ಪಣಿ ಬರೆಯಿರಿ