ಸಮರಸಾಧನ ಸವೆಯೆ ಕೋಪದ
ತಿಮಿರ ಗರಿಗಟ್ಟಿತು ಮಹಾವಿ
ಕ್ರಮನ ಚಳಕವನೇನ ಹೇಳುವೆ ರಥದ ಬಳಸಿನಲಿ
ಸಮತಳಿಸಿ ಕೈದುಗಳ ಮಳೆಯನು
ದ್ಯುಮಣಿತನಯನ ಮೇಲೆ ಕರೆದನು
ನಿಮಿಷಕದ ಪರಿಹರಿಸಿ ದೈತ್ಯನನೆಚ್ಚನಾ ಕರ್ಣ (ದ್ರೋಣ ಪರ್ವ, ೧೬ ಸಂಧಿ, ೪೩ ಪದ್ಯ)
ತಾತ್ಪರ್ಯ:
ಯುದ್ಧಸಾಧನಗಳು ಸವೆದು ಹೋಗಲು ಘಟೋತ್ಕಚನ ಕೋಪವು ಹೆಪ್ಪುಗಟ್ಟಿತು, ರಥದ ಸುತ್ತಲೂ ತಿರುಗಿ ಆಯುಧಗಳ ಮಳೆಯನ್ನು ಕರ್ಣನ ಮೇಲೆ ಸುರಿಸಿದನು. ಕರ್ಣನು ಅವನ್ನು ಕಡಿದು ಘಟೋತ್ಕಚನನ್ನು ಬಾಣಗಳಿಂದ ಹೊಡೆದನು.
ಅರ್ಥ:
ಸಮರ: ಯುದ್ಧ; ಸಾಧನ: ಗುರಿಮುಟ್ಟುವ ಪ್ರಯತ್ನ; ಸವೆ: ತೀರು, ಅಳಿ; ಕೋಪ: ಖತಿ; ತಿಮಿರ: ಅಂಧಕಾರ; ಗರಿಗಟ್ಟು: ಹೆಚ್ಚಾಗು; ವಿಕ್ರಮ: ಪರಾಕ್ರಮಿ; ಚಳಕ: ವೇಗ, ಶೀಘ್ರತೆ; ಹೇಳು: ತಿಳಿಸು; ರಥ: ಬಂಡಿ; ಬಳಸು: ಆವರಿಸುವಿಕೆ; ಸಮತಳಿಸು: ತೊಲಗಿಸು, ಅಣಿಗೊಳಿಸು; ಕೈದು: ಆಯುಧ; ಮಳೆ: ವರ್ಷ; ದ್ಯುಮಣಿ: ಸೂರ್ಯ; ತನಯ: ಮಗ; ಕರೆ: ಬೀಳು, ಆವರಿಸು; ನಿಮಿಷ: ಕ್ಷಣ; ಪರಿಹರಿಸು: ನಿವಾರಿಸು; ದೈತ್ಯ: ರಾಕ್ಷಸ; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ಸಮರ+ಸಾಧನ +ಸವೆಯೆ +ಕೋಪದ
ತಿಮಿರ +ಗರಿಗಟ್ಟಿತು+ ಮಹಾವಿ
ಕ್ರಮನ +ಚಳಕವನ್+ಏನ +ಹೇಳುವೆ +ರಥದ +ಬಳಸಿನಲಿ
ಸಮತಳಿಸಿ +ಕೈದುಗಳ +ಮಳೆಯನು
ದ್ಯುಮಣಿತನಯನ +ಮೇಲೆ +ಕರೆದನು
ನಿಮಿಷಕದ +ಪರಿಹರಿಸಿ+ ದೈತ್ಯನನ್+ಎಚ್ಚನಾ +ಕರ್ಣ
ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಕೋಪದ ತಿಮಿರ ಗರಿಗಟ್ಟಿತು
(೨) ಕರ್ಣನನ್ನು ದ್ಯುಮಣಿತನಯ ಎಂದು ಕರೆದಿರುವುದು
(೩) ಬಾಣಗಳನ್ನು ಬಿಟ್ಟನೆಂದು ಹೇಳುವ ಪರಿ – ಕೈದುಗಳ ಮಳೆಯನು ದ್ಯುಮಣಿತನಯನ ಮೇಲೆ ಕರೆದನು