ಪದ್ಯ ೪೧: ಘಟೋತ್ಕಚನು ಕರ್ಣನ ಮೇಲೆ ಯಾವ ಆಯುಧವನ್ನು ಬಿಟ್ಟನು?

ದರಿಗಳೊಳು ದರ್ವೀಕರಾವಳಿ
ಯುರವಣಿಸಿದರೆ ಬಲ್ಲುದೇ ಕುಲ
ಗಿರಿ ಮಹಾದೇವಾವ ಸತ್ವವೊ ದಾನವೇಶ್ವರಗೆ
ಅರಿಯ ಶರಹತಿಗೊಡಲು ನೆರೆ ಜ
ಜ್ಝರಿತವಾಗಲು ನೊಂದುದಿಲ್ಲ
ಬ್ಬರಿಸಿ ಪರಿಘದಲಿಟ್ಟನಂಬುಜಬಂಧುನಂದನನ (ದ್ರೋಣ ಪರ್ವ, ೧೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕೊಳ್ಳಗಳ್ಳಲ್ಲಿ ಹಾವುಗಳು ಬಂದರೆ ಕುಲಗಿರಿಗೆ ಅದು ತಿಳಿದೀತೇ? ಕರ್ಣನ ಬಾಣಗಳಿಂದ ದೇಹವು ಜಜ್ಝರಿತವಾದರೂ ದೈತ್ಯನಿಗೆ ನೋವಾಗಲಿಲ್ಲ. ಅವನು ಗರ್ಜಿಸಿ ಗದೆಯನ್ನು ಕರ್ಣನ ಮೇಲೆ ಬಿಟ್ಟನು.

ಅರ್ಥ:
ದರಿ: ಆಳ, ರಸಾತಳ, ಹಳ್ಳ; ದರ್ವೀಕರ: ಹಾವು; ಆವಳಿ: ಸಾಲು, ಗುಂಪು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಬಲ್ಲ: ತಿಳಿ; ಕುಲಗಿರಿ: ದೊಡ್ಡ ಬೆಟ್ಟ; ಸತ್ವ: ಸಾರ; ದಾನವ: ರಾಕ್ಷಸ; ಅರಿ: ತಿಳಿ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಕೊಡು: ನೀಡು; ನೆರೆ: ಗುಂಪು; ಜಜ್ಝರಿತ: ಪರಾಕ್ರಮಿ, ಶೂರ; ನೊಂದು: ಪೆಟ್ಟು; ಅಬ್ಬರಿಸು: ಆರ್ಭಟಿಸು; ಪರಿಘ: ಗದೆ; ಅಂಬುಜ: ತಾವರೆ; ಬಂಧು: ಸಂಬಂಧಿಕ; ನಂದನ: ಮಗ;

ಪದವಿಂಗಡಣೆ:
ದರಿಗಳೊಳು +ದರ್ವೀಕರಾವಳಿ
ಯುರವಣಿಸಿದರೆ +ಬಲ್ಲುದೇ +ಕುಲ
ಗಿರಿ +ಮಹಾದೇವ+ಆವ+ ಸತ್ವವೊ +ದಾನವೇಶ್ವರಗೆ
ಅರಿಯ +ಶರಹತಿಗ್+ಒಡಲು +ನೆರೆ +ಜ
ಜ್ಝರಿತವಾಗಲು +ನೊಂದುದಿಲ್ಲ್
ಅಬ್ಬರಿಸಿ +ಪರಿಘದಲಿಟ್ಟನ್+ಅಂಬುಜಬಂಧುನಂದನನ

ಅಚ್ಚರಿ:
(೧) ಕರ್ಣನನ್ನು ಅಂಬುಜಬಂಧುನಂದನ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ದರಿಗಳೊಳು ದರ್ವೀಕರಾವಳಿಯುರವಣಿಸಿದರೆ ಬಲ್ಲುದೇ ಕುಲಗಿರಿ

ನಿಮ್ಮ ಟಿಪ್ಪಣಿ ಬರೆಯಿರಿ