ಪದ್ಯ ೨೩: ದುರ್ಯೋಧನನು ಕರ್ಣನಿಗೆ ಏನು ಹೇಳಿದನು?

ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಲರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ (ದ್ರೋಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ, ಈ ಮಾತು ಸಾಕು, ದೈತ್ಯನನ್ನು ಸಂಹರಿಸು, ನಮ್ಮ ಪರಾಕ್ರಮಿಗಳು ಬಾಯಿಬಾಯಿ ಬಿಡುತ್ತಿದ್ದಾರೆ, ತಡೆಯದೆ ತಡಮಾಡದೆ ಈ ರಾಕ್ಷಸನನ್ನು ಸಂಹರಿಸು. ವೀರರೂ ಸಮರ್ಥರೂ ತಲ್ಲಣಗೊಂಡಿದ್ದಾರೆ. ಕಾಲವನ್ನು ಸುಮ್ಮನೇ ವ್ಯರ್ಥಮಾಡಬೇಡ ಎಂದು ದುರ್ಯೋಧನನು ಕರ್ಣನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ದೈತ್ಯ: ರಾಕ್ಷಸ; ಕೆಡಹು: ಬೀಳಿಸು, ನಾಶಮಾಡು; ಸೇನೆ: ಸೈನ್ಯ; ಸುಭಟ: ವೀರ; ನೂಕು: ತಳ್ಳು; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ತಡೆ: ನಿಲ್ಲಿಸು; ತಡ: ನಿಧಾನ; ಆಕೆವಾಳ: ವೀರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ವೀರ: ಶೂರ; ತಲ್ಲಣ: ಅಂಜಿಕೆ, ಭಯ; ತಗಹು: ಅಡ್ಡಿ, ತಡೆ; ಕಾಲಕ್ಷೇಪ: ಕಾಲ ಕಳೆಯುವುದು; ರಾಯ: ರಾಜ; ಆನೀಕ: ಸಮೂಹ;

ಪದವಿಂಗಡಣೆ:
ಸಾಕು +ದೈತ್ಯನ +ಕೆಡಹು +ಸೇನೆಯ
ಸಾಕು +ಸುಭಟರು +ಬಾಯಬಿಡುತಿದೆ
ನೂಕು +ನೂಕ್+ಅಮರಾರಿಯನು +ತಡೆ +ತಡವು+ಮಾಡದಿರು
ಆಕೆವಾಳರು +ವಿಗಡ +ವೀರಾ
ನೀಕವಿದೆ +ತಲ್ಲಣದ +ತಗಹಿನ
ಲೇಕೆ +ಕಾಲಕ್ಷೇಪವೆಂದನು +ಕೌರವರ+ರಾಯ

ಅಚ್ಚರಿ:
(೧) ಸಾಕು, ನೂಕು – ಪ್ರಾಸ ಪದಗಳು
(೨) ಆಕೆವಾಳ, ಸುಭಟ, ವಿಗಡ, ವೀರಾನೀಕ – ಸಾಮ್ಯಾರ್ಥ ಪದಗಳು
(೩) ತಡೆ, ತಡ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ