ಪದ್ಯ ೪೩: ಕೃಷ್ಣನು ಯಾರನ್ನು ಕರೆಯಲು ಧರ್ಮಜನಿಗೆ ಹೇಳಿದನು?

ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ (ದ್ರೋಣ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಧರ್ಮಜನಿಗೆ ಹೇಳಿದನು, ಎಲೈ ಧರ್ಮಜ ಶೂರನಾದ ಘಟೋತ್ಕಚನನ್ನು ಕರೆಸು, ಈ ರಾತ್ರಿಯ ಕಾಳಗಕ್ಕೆ ಅವನೇ ಸರಿ, ಸಾತ್ಯಕಿ, ಅರ್ಜುನ, ಭೀಮ, ನಕುಲ ಸಹದೇವರಿಗೆ ರಾತ್ರಿಯ ಕಾಳಗ ತಿಳಿಯದು, ರಾತ್ರಿಯ ಯುದ್ಧದ ರೀತಿಯನ್ನು ಘಟೋತ್ಕಚನೇ ಬಲ್ಲ. ಅವನು ಗೆಲ್ಲುತ್ತಾನೆ ಎಂದು ಕೃಷ್ಣನು ಹೇಳಲು, ಧರ್ಮಜನ ಅಪ್ಪಣೆಯಂತೆ ಘಟೋತ್ಕಚನು ಬಂದನು.

ಅರ್ಥ:
ಕರಸು: ಬರೆಮಾಡು; ಕಲಿ: ಶೂರ; ಇರುಳು: ರಾತ್ರಿ; ಬವರ: ಯುದ್ಧ; ನಿಲಲಿ: ನಿಲ್ಲು; ನರ: ಅರ್ಜುನ; ವೃಕೋದರ: ಭೀಮ; ಆದಿ: ಮುಂತಾದ; ಇರುಳು: ರಾತ್ರಿ; ರಣ: ಯುದ್ಧ; ಆಯತ: ವಿಶಾಲವಾದ; ಹಿರಿದು: ಹೆಚ್ಚಿನದು; ಬಲ್ಲ: ತಿಳಿ; ಗೆಲುವು: ಜಯ; ಮುರಹರ: ಕೃಷ್ಣ; ನೇಮ: ನಿಯಮ, ಆಜ್ಞೆ; ಅನಿಲ: ವಾಯು; ತನಯ: ಮಗ; ಐತಂದ: ಬಂದು ಸೇರು;

ಪದವಿಂಗಡಣೆ:
ಕರಸು +ಧರ್ಮಜ +ಕಲಿ+ಘಟೋತ್ಕಚನ್
ಇರುಳು+ಬವರಕೆ +ನಿಲಲಿ +ಸಾತ್ಯಕಿ
ನರ+ ವೃಕೋದರ +ನಕುಲ+ ಸಹದೇವಾದಿಗಳಿಗ್+ಅರಿದು
ಇರುಳು +ರಣದ್+ಆಯತವನ್+ಅವನೇ
ಹಿರಿದು +ಬಲ್ಲನು +ಗೆಲುವನ್+ಎನೆ +ಮುರ
ಹರನ +ನೇಮದಲ್+ಅನಿಲ+ತನಯನ+ತನಯನ್+ಐತಂದ

ಅಚ್ಚರಿ:
(೧) ಬವರ, ರಣ – ಸಮಾನಾರ್ಥಕ ಪದ
(೨) ಘಟೋತ್ಕಚನನ್ನು ಕರೆಯುವ ಪರಿ – ಅನಿಲತನಯನತನಯ

ನಿಮ್ಮ ಟಿಪ್ಪಣಿ ಬರೆಯಿರಿ