ಪದ್ಯ ೪೦: ಕೃಷ್ಣನ ಹಿರಿಮೆ ಎಂತಹುದು?

ಆವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ (ದ್ರೋಣ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರ ಮಧುರ ವಚನ, ಕೃಪಾದೃಷ್ಟಿಗಳಿಂದ ಅನೇಕ ಜನ್ಮಗಳಲ್ಲಿ ಗಳಿಸಿದ ಪಾಪದ ಭಯ ನಿವಾರಿತವಾಗುವುದೋ, ಅಮ್ತಹ ದೇವನ ಲಲಿತ ವಚನ ಸುಧೆಯ ಸಿಂಚನದಿಂದ ಯೋಧರು ಪುನರುಜ್ಜೀವಿಸುವುದೇನು ಆಶ್ಚರ್ಯ.

ಅರ್ಥ:
ಮಧುರ: ಸಿಹಿ; ವಚನ: ವಾಣಿ, ನುಡಿ; ಅವಲೋಕನ: ನೋಟ; ಕೃಪ: ದಯೆ; ಶತ: ನೂರು; ಜನ್ಮ: ಹುಟ್ಟು ಸಾವುಗಳ ಚಕ್ರ; ಆವಳಿ: ಗುಂಪು; ಘನ: ಶ್ರೇಷ್ಠ; ದುರಿತ: ಪಾಪ, ಪಾತಕ; ವಹ್ನಿ: ಬೆಂಕಿ; ಝಳ: ಪ್ರಕಾಶ; ಕಡೆ: ಕೊನೆ; ದೇವ: ಭಗವಮ್ತ; ಲಲಿತ: ಚೆಲುವು; ವಚನ: ಮಾತು; ಸುಧಾ: ಅಮೃತ; ಸೇಚನ: ಸಿಂಪಡಿಸು; ಭಟ: ಸೈನಿಅ; ಉರೆ: ಅತಿಶಯವಾಗಿ; ಅರಿ: ತಿಳಿ; ಕ್ಷಿತಿಪ: ರಾಜ;

ಪದವಿಂಗಡಣೆ:
ಆವನ್+ಒಬ್ಬನ +ಮಧುರವಚನ +ಕೃಪ
ಅವಲೋಕನದಿಂದ +ಶತ +ಜ
ನ್ಮಾವಳಿಯ +ಘನ +ದುರಿತ+ವಹ್ನಿಯ +ಝಳಕೆ +ಕಡೆಯಹುದು
ದೇವರ್+ಈತನ +ಲಲಿತ+ವಚನ+ಸು
ಧಾವ+ಸೇಚನದಿಂದ +ಭಟರ್+ಉರೆ
ಜೀವಿಸುವುದೇನ್+ಅರಿದೆ +ಕೇಳ್ +ಜನಮೇಜಯ+ಕ್ಷಿತಿಪ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಆವನೊಬ್ಬನ ಮಧುರವಚನ ಕೃಪಾವಲೋಕನದಿಂದ ಶತ ಜನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು

ನಿಮ್ಮ ಟಿಪ್ಪಣಿ ಬರೆಯಿರಿ