ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು
ಹಣಿದದಲಿ ತಮ್ಮೊಳಗೊಳಗೆ ಸಂ
ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ
ರಣಮಹೀಸಂತಮಸಶಾಂತೇ
ಕ್ಷಣರು ದಿಗುಭ್ರಮೆಯಲಿ ಸ್ವಕೀಯ
ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ (ದ್ರೋಣ ಪರ್ವ, ೧೫ ಸಂಧಿ, ೩೦ ಪದ್ಯ)
ತಾತ್ಪರ್ಯ:
ತಲೆಯೊತ್ತಿ ಹೆಣಗಿ ಹೊಯ್ದರು, ಒಟ್ಟಾಗಿ ತಮ್ಮ ತಮ್ಮಲ್ಲೇ ಬಾಣಗಳನ್ನು ಬಿಟ್ಟರು. ರಣಭೂಮಿಯ ಕತ್ತಲಲ್ಲಿ ಸರಿಯಾಗಿ ಕಾಣದಿದ್ದುದರಿಂದ ತಮ್ಮವರನ್ನೇ ಹೊಯ್ದರು. ರಾತ್ರಿಯ ಯುದ್ಧವು ರೌರವ ನರಕ ಸಮಾನವಾಯಿತು.
ಅರ್ಥ:
ಹೆಣಗು: ಹೋರಾಡು; ಮಿಗೆ: ಅಧಿಕ; ತಲೆ: ಶಿರ; ಹೊಯ್ದು: ಹೊಡೆ; ಹಣೆ: ಬಾಗು, ಮಣಿ; ಸಂದಣಿ: ಗುಂಪು; ಅಂಬು: ಬಾಣ; ಸಿರಿ: ಐಶ್ವರ್ಯ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ರಣ: ಯುದ್ಧರಂಗ; ಮಹೀ: ಭೂಮಿ; ದಿಗ್ಭ್ರಮೆ: ಆಶ್ಚರ್ಯ; ಸ್ವಕೀಯ: ತಮ್ಮ ಪಕ್ಷ; ಶಾಂತೀಕ್ಷಣ: ಸಮಾಧಾನದಿಂದ ನೋಡುವವ; ರಚಿಸು: ನಿರ್ಮಿಸು; ರೌರವ: ಭಯಾನಕ; ರಾತ್ರಿ: ಇರುಳು;
ಪದವಿಂಗಡಣೆ:
ಹೆಣಗಿ +ಮಿಗೆ +ತಲೆಯೊತ್ತಿ +ಹೊಯ್ದರು
ಹಣಿದದಲಿ +ತಮ್ಮ್+ಒಳಗೊಳಗೆ +ಸಂ
ದಣಿಗಳಲಿ +ಸೈಗರೆದರ್+ಅಂಬಿನ +ಸಿರಿಯನ್+ಉರವಣಿಸಿ
ರಣಮಹೀಸಂತಮಸ+ಶಾಂತೇ
ಕ್ಷಣರು +ದಿಗುಭ್ರಮೆಯಲಿ+ ಸ್ವಕೀಯ
ಕ್ಷಣನವನು +ರಚಿಸಿದರು +ರೌರವವಾಯ್ತು +ರಾತ್ರಿಯಲಿ
ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರಚಿಸಿದರು ರೌರವವಾಯ್ತು ರಾತ್ರಿಯಲಿ
(೨) ಹಣಿ, ಸಂದಣಿ; ಶಾಂತೇಕ್ಷಣ, ಸ್ವಕೀಯಕ್ಷಣ
(೩) ಯುದ್ಧಭೂಮಿ ಎಂದು ಕರೆಯುವ ಪರಿ – ರಣಮಹೀ
(೪) ಸ ಕಾರದ ತ್ರಿವಳಿ ಪದ – ಸಂದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ