ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ನಿಮ್ಮ ಟಿಪ್ಪಣಿ ಬರೆಯಿರಿ