ಪದ್ಯ ೨೨: ಭೂರಿಶ್ರವನ ತಲೆಯನ್ನು ಯಾರು ಕಡೆದರು?

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.

ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;

ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ

ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ