ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)
ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.
ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;
ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ
ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು