ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)
ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.
ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;
ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ
ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ