ಪದ್ಯ ೧೬: ಕೃಷ್ಣನು ಯಾವ ವಿದ್ಯೆಯಲ್ಲಿ ನಿಸ್ಸೀಮನೆಂದು ಭೂರಿಶ್ರವನು ಹೇಳಿದನು?

ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.

ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;

ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ

ನಿಮ್ಮ ಟಿಪ್ಪಣಿ ಬರೆಯಿರಿ