ಪದ್ಯ ೧೧: ಕೃಷ್ಣನು ಅರ್ಜುನನಿಗೇಕೆ ಜರೆದನು?

ಕೊಡಹಿ ಕುಸುಕಿರಿದಡ್ಡಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತರಹಿಲ್ಲೆಂದು ಮುರರಿಪು ಜರೆದನರ್ಜುನನ (ದ್ರೋಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೂರಿಶ್ರವನು ಸಾತ್ಯಕಿಯ ಕೂದಲು ಹಿಡಿದು ಕೊಡವಿ, ನೆಲಕ್ಕೆ ಕುಕ್ಕಿ ಅಡ್ಡಗೆಡವಿ ಭೂಜದಿಂದ ಹೊಡೆದು ಕತ್ತಿಯಿಂದ ಕೊರಳನ್ನು ಕತ್ತರಿಸಲು ಮುಂಬರಿದನು. ಆಗ ಶ್ರೀಕೃಷ್ಣನು, ಅರ್ಜುನ ನಿನ್ನ ಶಿಷ್ಯನಾದ ಸಾತ್ಯಕಿ ಹೀನ ದುರ್ಗತಿಯನ್ನು ನೋಡು, ಚರ್ಚೆಗೆ ಸಮಯವಿಲ್ಲ ಎಂದು ಜರೆದನು.

ಅರ್ಥ:
ಕೊಡಹು: ಜಗ್ಗು, ಅಲ್ಲಾಡಿಸು; ಕುಸುಕಿರಿ: ಹೊಡೆ; ಬೀಳು: ಕುಸಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೃಪಾಣ: ಕತ್ತಿ, ಖಡ್ಗ; ಜಡಿ: ಬೆದರಿಕೆ; ಗಂಟಲು: ಕಂಠ; ಬಳಿಗೆ: ಹತ್ತಿರ; ಹೂಡು: ಅಣಿಗೊಳಿಸು; ಅರಿ: ಸೀಳು; ಕೊರಳು: ಗಂಟಲು; ಹಿಡಿ: ಗ್ರಹಿಸು; ಅಸ್ತ್ರ: ಶಸ್ತ್ರ; ಶಿಷ್ಯ: ವಿದ್ಯಾರ್ಥಿ; ಕಡು: ಬಹಳ; ನಿರೋಧ: ಪ್ರತಿಬಂಧ; ನೋಡು: ವೀಕ್ಷಿಸು; ನುಡಿ: ಮಾತು; ತರಹರಿಸು: ಸೈರಿಸು; ಮುರರಿಪು: ಕೃಷ್ಣ; ಜರೆ: ಬಯ್ಯು;

ಪದವಿಂಗಡಣೆ:
ಕೊಡಹಿ +ಕುಸುಕಿರಿದ್+ಅಡ್ಡಬೀಳಿಕಿ
ಮಡದಲ್+ಉರೆ +ಘಟ್ಟಿಸಿ +ಕೃಪಾಣವ
ಜಡಿದು +ಗಂಟಲ +ಬಳಿಗೆ +ಹೂಡಿದನ್+ಅರಿವುದಕೆ +ಕೊರಳ
ಹಿಡಿ +ಮಹಾಸ್ತ್ರವ +ನಿನ್ನ + ಶಿಷ್ಯನ
ಕಡು +ನಿರೋಧವ +ನೋಡು +ಫಲುಗುಣ
ನುಡಿಗೆ +ತರಹಿಲ್ಲೆಂದು +ಮುರರಿಪು+ ಜರೆದನ್+ಅರ್ಜುನನ

ಅಚ್ಚರಿ:
(೧) ಹೋರಾಟವನ್ನು ವಿವರಿಸುವ ಪರಿ – ಕೊಡಹಿ ಕುಸುಕಿರಿದಡ್ಡಬೀಳಿಕಿಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
(೨) ಗಂಟಲ, ಕೊರಳು – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ