ಪದ್ಯ ೪: ಸಾತ್ಯಕಿ ಭೂರಿಶ್ರವರ ಯುದ್ಧವನ್ನು ಯಾರು ಪ್ರಶಂಶಿಸಿದರು?

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ (ದ್ರೋಣ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಹಾಗಾದರೆ ಈ ಬಾಣಗಳ ರುಚಿಯನ್ನು ನೋಡು ಎನ್ನುತ್ತಾ ಸಾತ್ಯಕಿಯು ಆಕಾಶದ ತುಂಬ ಬಾಣಗಳನ್ನು ಬಿಟ್ಟನು. ಸೋಮದತ್ತನ ಮಗನಾದ ಭೂರಿಶ್ರವನು ಓಹೋ ಬಲಿತಿದ್ದಾನೆ, ಉಳಿದುಕೋ ಎನ್ನುತ್ತಾ ಬಾಣಗಲನ್ನು ಬಿಟ್ಟನು. ಬಾಣಗಳ ಓಡಾಟ ಹೆಚ್ಚಾಯಿತು. ಕೋಪದಿಂದ ಕಾದಾಡುತ್ತಿದ್ದ ಇಬ್ಬರ ಕಾಳಗವನ್ನು ದೇವ ದಾನವರಿಬ್ಬರ ಗುಂಪುಗಳು ಮೆಚ್ಚಿದವು.

ಅರ್ಥ:
ಕೊಳ್ಳು: ತೆಗೆದುಕೋ; ಅಭ್ರ: ಆಗಸ; ಕೋದು: ಸೇರಿಸು, ಪೋಣಿಸು; ಅಂಬು: ಬಾಣ; ಬಲು: ಬಹಳ; ಹಾಯ್ದು: ಮೇಲೆಬಿದ್ದು; ಮಝ: ಭಲೇ; ಕಡಿ: ಸೀಳು; ಸುತ: ಮಗ; ಕಾದು: ರಕ್ಷಣೆ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬೀದಿವರಿ: ಸುತ್ತಾಡು, ಅಲೆದಾಡು; ಬಲುಹು: ಬಹಳ; ಖತಿ: ಕೋಪ; ಕೈದು: ಆಯುಧ, ಶಸ್ತ್ರ; ಕೈದುಕಾರ: ಆಯುಧವನ್ನು ಧರಿಸಿದವ; ಮೆಚ್ಚಿಸು: ಪ್ರಶಂಶಿಸು; ಅಮರ: ದೇವತೆ: ಅಸುರ: ದಾನವ; ಆವಳಿ: ಗುಂಪು;

ಪದವಿಂಗಡಣೆ:
ಆದಡ್+ಇದ +ಕೊಳ್ಳೆನುತ +ಸಾತ್ಯಕಿ
ಕೋದನ್+ಅಭ್ರವನ್+ಅಂಬಿನಲಿ +ಬಲು
ಹಾದನೈ +ಮಝ +ಎನುತ +ಕಡಿದನು +ಸೋಮದತ್ತಸುತ
ಕಾದುಕೊಳ್ಳ್+ಎನುತ್+ಎಚ್ಚನ್+ಅಂಬಿನ
ಬೀದಿವರಿ +ಬಲುಹಾಯ್ತು +ಖತಿಯಲಿ
ಕೈದುಕಾರರು +ಮೆಚ್ಚಿಸಿದರ್+ಅಮರ+ಅಸುರ+ಆವಳಿಯ

ಅಚ್ಚರಿ:
(೧) ಭೂರಿಶ್ರವನ ಪರಿಚಯ – ಸೋಮದತ್ತಸುತ
(೨) ಅ ಕಾರದ ಪದಜೋಡಣೆ – ಮೆಚ್ಚಿಸಿದರಮರಾಸುರಾವಳಿಯ

ನಿಮ್ಮ ಟಿಪ್ಪಣಿ ಬರೆಯಿರಿ